ಬಯೋಮೆಟ್ರಿಕ್ ಸರ್ವರ್ ದೋಷ : ಗಂಟೆಗಟ್ಟಲೆ ಕಾದು ಕೂರುವ ಶಿಕ್ಷೆ
ಸರ್ವರ್ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು : ಜನರ ಹಿಡಿ ಶಾಪ
ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳ ಮುಂದೆ ಜನಸ್ತೋಮ ನಿಂತು ಹೈರಾಣಾಗಿದೆ.. ಕಳೆದೊಂದು ವಾರಗಳಿಂದ ಪಡಿತರ ವಿತರಣೆ ಮಾಡುತ್ತಿದ್ದರೂ, ಎಲ್ಲಾ ಗ್ರಾಹಕರಿಗೆ ಪಡಿತರ ತಲುಪಿಸಲು ಸಾಧ್ಯವಾಗಿಲ್ಲ… ಇದರಿಂದಾಗಿ ಸಾರ್ವಜನಿಕರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ…ಇದಕ್ಕೆಲ್ಲ ಕಾರಣವಾಗಿದ್ದು ಗ್ರಾಹಕರ ಬೆರಳಚ್ಚು (ಬಯೋಮೆಟ್ರಿಕ್) ಪಡೆಯುವ ಸರ್ವರ್ ಗಳ ದೋಷ…ಇದರಿಂದಾಗಿ ಜನರ ನರಳಾಟ…. ಸರ್ವರ್ ವೈಫಲ್ಯದಿಂದಾಗಿ ಜನರು ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ…
ಪಡಿತರ ಮಳಿಗೆಗಳಲ್ಲಿ ಇ-ಪಿಒಎಸ್ (ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್) ಯಂತ್ರಗಳ ಕಾರ್ಯಾಚರಣೆಗೆ ಅನುಕೂಲವಾಗುವ ಆನ್ಲೈನ್ ವ್ಯವಸ್ಥೆಯಲ್ಲಿನ ಸರ್ವರ್ ದೋಷದಿಂದಾಗಿ ರಾಜ್ಯದಲ್ಲಿ ಸಾರ್ವಜನಿಕ ವಿತರಣೆಯು ಬಿಕ್ಕಟ್ಟಿನಲ್ಲಿ ಮುಳುಗಿದೆ.
ಹಲವು ದಿನಗಳಿಂದ ತೊಂದರೆಯಾಗುತ್ತಿರುವುದರಿಂದ ಕೆಲವು ಕಡೆ ಪಡಿತರ ವಿತರಕರು ತಮ್ಮ ಅಂಗಡಿಯ ಬಾಗಿಲುಗಳನ್ನು ಮುಚ್ಚಿ ಪಡಿತರ ಪೂರೈಕೆಯನ್ನೆ ಸ್ಥಗಿತಗೊಳಿಸಿದ್ದಾರೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಪಡಿತರ ಚೀಟಿದಾರರು, ತಮ್ಮ ಆಹಾರ ಪದಾರ್ಥಗಳನ್ನು ಪಡೆಯಲು ಅರ್ಧ ಗಂಟೆಗೂ ಹೆಚ್ಚಿನ ಅವಧಿ ಕಾಯುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ದಾರರು ತಿಂಗಳ ಪಡಿತರವನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಬಯೋಮೆಟ್ರಿಕ್ ಸರ್ವರ್ ದೋಷದಿಂದಾಗಿ ಬಡಜನರು ದುಡಿಮೆಯನ್ನು ಬಿಟ್ಟು ಪಡಿತರಕ್ಕಾಗಿ ಕಾದು ಕೂರುವಂತಾಗಿದೆ.
ಕೆಲವೆಡೆ ಫಲಾನುಭವಿಗಳು ಗಂಟೆಗಳ ಕಾಲ ಪಡಿತರ ಅಂಗಡಿಗಳ ಹೊರಗೆ ಕಾದು ಬರಿಗೈಯಲ್ಲಿ ಹಿಂದಿರುಗಿದ ಘಟನೆ ನಡೆದಿದೆ. e-PoS ಯಂತ್ರಗಳು ಪ್ರಾರಂಭದಲ್ಲಿ ಆಗಾಗ್ಗೆ ಆಫ್ಲೈನ್ಗೆ ಹೋಗುತ್ತವೆ ಎಂದು ಪಡಿತರ ವಿತರಕರು ದೂರಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸರ್ವರ್ ಸಮಸ್ಯೆ ಬಗೆಹರಿಸುವುದಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ, ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಬದಲು ನ್ಯಾಯಬೆಲೆ ಅಂಗಡಿಗಳನ್ನೆ ನಡೆಸುವುದು ಕಷ್ಟಕರವಾಗಿದೆ ಎಂದು ಪಡಿತರ ವಿತರಕರು ಅಳಲು ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಯೊಬ್ಬರು, ಇಲಾಖೆಯಲ್ಲಿ ದತ್ತಾಂಶ ಕೇಂದ್ರದ ಸೆಂಟ್ರಲ್ ಸರ್ವರ್ನಲ್ಲಿನ ದೋಷದಿಂದಾಗಿ ಸಮಸ್ಯೆ ಉಂಟಾಗಿದೆ. ಇದರಿಂದ ವಿವಿಧ ಇಲಾಖೆಗಳ ಕಾರ್ಯನಿರ್ವಹಣೆಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಬಯೋಮೆಟ್ರಿಕ್ ಸರ್ವರ್ ದೋಷವನ್ನು ಕೂಡಲೇ ಸರಿಪಡಿಸಿ ಬಡವರು, ಶ್ರಮಿಕರು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾದು ನಿಲ್ಲುವ ಶಿಕ್ಷೆಯಿಂದ ಮುಕ್ತಿ ನೀಡಬೇಕಾಗಿದೆ.