ನಾಗಮಂಗಲ ತಾಲ್ಲೂಕಿನ ಸಮಾಜ ಸೇವಕ ಪೈಟರ್ ರವಿ ಅವರ ಬೆಂಬಲಿಗ ಮಹೇಶ್ ಎಂಬುವರ ಕೊಲೆಗೆ ವಿಫಲ ಯತ್ನ ನಡೆದಿರುವ ಘಟನೆ ಗುರುವಾರ ಬಿಂಡಿಗನವಿಲೆಯಲ್ಲಿ ನಡೆದಿದೆ.
ಬಿಂಡಗನವಿಲೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಡೈರಿ ತಿಮ್ಮಪ್ಪ ಅಲಿಯಾಸ್ ಸುರೇಶ್ ಎಂಬಾತ ಮಹೇಶ್ ಕೊಲೆಗೆ ಯತ್ನಿಸಿದ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಬಿಂಡಗಿನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಬೆಳಗಿನ ಜಾವ 6 ಗಂಟೆಯ ಸಮಯದಲ್ಲಿ ಮಹೇಶ್ ಶೌಚಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿಯೇ ವಾಸವಾಗಿದ್ದ ಆರೋಪಿ ಡೈರಿ ತಿಮ್ಮಪ್ಪ ತಮ್ಮ ಮನೆಯ ಮಹಡಿ ಮೇಲೆ ನಿಂತು ಮಹೇಶ್ ಅವರ ಮನೆಯ ಶೌಚಾಲಯದ ಸಿಮೆಂಟಿನ ಶೀಟ್ ಮೇಲೆ ಸೈಜುಗಲ್ಲು ಎತ್ತಿ ಹಾಕಿದ್ದಾರೆ ಎನ್ನಲಾಗಿದೆ. ಆದರೆ ಕೂದಲೇಳೆ ಅಂತರದಲ್ಲಿ ಮಹೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹೇಶ್ ತಕ್ಷಣವೇ ಶೌಚಾಲಯದ ಹೊರಗೆ ಬಂದು ನೋಡಿದಾಗ ಡೈರಿ ತಿಮ್ಮಪ್ಪ ಮಹಡಿ ಮೇಲಿನಿಂದ ಓಡಿ ಹೋಗುವುದನ್ನು ಕಂಡಿರುವುದಾಗಿ ಮಹೇಶ್ ತಿಳಿಸಿದ್ದಾರೆ.
ಮಹೇಶ್ ಕಳೆದ ಕೆಲವು ವರ್ಷಗಳಿಂದ ಸಮಾಜ ಸೇವಕ ಫೈಟರ್ ರವಿ ಅವರೊಂದಿಗೆ ಗುರುತಿಸಿಕೊಂಡಿದ್ದು, ಅವರ ಬೆಳವಣಿಗೆ ಸಹಿಸಲಾಗದೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದ ಮಹೇಶ್ ಅವರ ಕುಟುಂಬ ಆತಂಕದಲ್ಲಿ ಬದುಕುವ ದುಸ್ಥಿತಿ ನಿರ್ಮಾಣವಾಗಿದೆ.
ಬಿಂಡಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಕ್ಷಣವೇ ಆರೋಪಿಯನ್ನು ಬಂಧಿಸಬೇಕೆಂದು ಮಹೇಶ್ ಕುಟುಂಬದವರು ಒತ್ತಾಯಿಸಿದ್ದಾರೆ.