ಮಳೆಯಿಂದ ಸಂಚಾರಕ್ಕೆ ತೀವ್ರ ತೊಂದರೆ ಆಗಿರುವ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ವೀಕ್ಷಣೆಗೆ ಸಂಸದೆ ಸುಮಲತಾ ಅಂಬರೀಶ್ ಬಂದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಸ್ಥಳಕ್ಕೆ ಬರದೆ ಅಗೌರವ ತೋರಿದ್ದಾರೆ ಎಂದು ಜನರು ಆರೋಪಿಸಿದರು.
ದಿಲಿಪ್ ಬಿಲ್ಡ್ ಕಾನ್ ಸಂಸ್ಥೆ ಗುತ್ತಿಗೆ ಹಿಡಿದಿರುವ ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆ ಜನರಿಗೆ ಅನುಕೂಲಕ್ಕಿಂತ ಸಾಕಷ್ಟು ಅನಾನುಕೂಲವೇ ಆಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಪ್ರತಿ ಬಾರಿ ಮಳೆ ಬಂದಾಗಲೂ ಹೆದ್ದಾರಿಗೆ ನೀರು ನುಗ್ಗಿ ಜನರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತದೆ. ಅಲ್ಲದೆ ಅಕ್ಕಪಕ್ಕದ ಗದ್ದೆಗಳಿಗೂ ನೀರು ನುಗ್ಗಿ ರೈತರಿಗೂ ಸಾಕಷ್ಟು ತೊಂದರೆಯಾಗಿತ್ತು.
ಸುಮಲತಾ ಬಂದ್ರೆ ಗೈರು
ಹೆದ್ದಾರಿ ಅವ್ಯವಸ್ಥೆ ಬಗ್ಗೆ ಜನರು ಮತ್ತು ರೈತರು ಸಾಕಷ್ಟು ದೂರು ಸಲ್ಲಿಸಿದ್ದರಿಂದ ಇಂದು ಹೆದ್ದಾರಿ ವೀಕ್ಷಣೆಗೆ ಸಂಸದೆ ಸುಮಲತಾ ಅಂಬರೀಶ್ ಬಂದಿದ್ದರು. ಅವರೊಂದಿಗೆ ಬಂದು ಮಾತನಾಡಬೇಕಿದ್ದ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಶ್ರೀಧರ್ ಮಾತ್ರ ತಾನು ಬರದೆ ಗೈರಾಗಿ ಯಾರೋ ಒಬ್ಬ ಇಂಜಿನಿಯರ್ ಅನ್ನು ಕಳುಹಿಸಿದ್ದರು.
ಇದರಿಂದ ಸಿಟ್ಟಾದ ಸುಮಲತಾ ಅವರು, ಮಂಡ್ಯ ಎಂಪಿ ಅಂದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಲೆಕ್ಕಕ್ಕೆ ಇಲ್ಲ. ಯೋಜನಾ ನಿರ್ದೇಶಕ ಶ್ರೀಧರ್ ಬರದೆ ಯಾರೋ ನಿರಂಜನ್ ಎಂಬ ಇಂಜಿನಿಯರ್ ಕಳಿಸಿದ್ದಾರೆ ಎಂದು ಆತನ ಮೂಲಕ ಶ್ರೀಧರ್ ಅವರಿಗೆ ಪೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರತಾಪ ಸಿಂಹ ಬಂದ್ರೆ ಹಾಜರ್
ಸುಮಲತಾ ಅಂಬರೀಶ್ ಬಂದರೆ ಗೈರಾಗುವ ಶ್ರೀಧರ್ ಮೈಸೂರು ಸಂಸದ ಪ್ರತಾಪ ಸಿಂಹ ಬಂದ್ರೆ ಹಾಜರ್ ಆಗುತ್ತಾರೆ.ಪ್ರತಾಪ ಸಿಂಹ ಒಂದಾಗಲೆಲ್ಲ ಅವರ ಪಕ್ಕದಲ್ಲಿ ಬಂದು ನಿಲ್ಲುವ ಶ್ರೀಧರ್ ಮಂಡ್ಯ ಸಂಸದ ಸುಮಲತಾ ಅವರು ಬಂದರು ಸ್ಥಳಕ್ಕೆ ಬರದೆ ಡೋಂಟ್ ಕೇರ್ ವ್ಯಕ್ತಿತ್ವ ತೋರಿಸುತ್ತಾರೆ. ಒಬ್ಬ ಸಂಸದೆ ಬಂದರೂ ಬೆಲೆ ಕೊಡದ ಶ್ರೀಧರ್ ಬಿಜೆಪಿ ಪಕ್ಷದ ಮುಖಂಡನಾ ಅಥವಾ ಕಾರ್ಯಕರ್ತನಾ ಎಂದು ಜನರೇ ಟೀಕಿಸುತ್ತಿದ್ದಾರೆ.
ಎಚ್ಡಿಕೆ ಎಚ್ಚರಿಕೆ
ಮೈಸೂರು ಕ್ಷೇತ್ರಕ್ಕೆ ಐದಾರು ಕಿಲೋಮೀಟರ್ ಬರುವ ಬೆಂಗಳೂರು-ಮೈಸೂರು ಹೆದ್ದಾರಿ ಮುಖ್ಯವಾಗಿ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚು ಕಿ.ಮೀ.ಸಾಗುತ್ತದೆ. ಆದರೆ ಐದಾರು ಕಿಲೋಮೀಟರ್ ವ್ಯಾಪ್ತಿಯ ಮೈಸೂರು ಸಂಸದ ಪ್ರತಾಪ ಸಿಂಹ ಬೆಂಗಳೂರಿನಿಂದ ಮೈಸೂರಿನವರೆಗೂ ಹೆದ್ದಾರಿ ವೀಕ್ಷಣೆಗೆ ಬರುತ್ತಾರೆ,ಸಲಹೆ ಕೊಡುತ್ತಾರೆ.
ಸಂಸದ ಪ್ರತಾಪ ಸಿಂಹ ಅವೈಜ್ಞಾನಿಕ ಹೆದ್ದಾರಿ ಬಗ್ಗೆ ಹಾಗೂ ಯೋಜನಾ ನಿರ್ದೇಶಕ ಶ್ರೀಧರ್ ಬಗ್ಗೆ ಸಮರ್ಥನೆ ಮಾಡಿಕೊಂಡದ್ದನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿ ಜನರ ಸಿಟ್ಟು ಈಗಾಗಲೇ ನೆತ್ತಿಗೇರಿದೆ ಮತ್ತೆ ಮಳೆ ಬಂದು ಏನಾದರೂ ಆದರೆ ಶ್ರೀಧರ್ ಅವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕ್ರಮಕ್ಕೆ ಆಗ್ರಹ
ಬೆಂಗಳೂರು- ಮೈಸೂರು ಹೆದ್ದಾರಿ ಯೋಜನಾ ನಿರ್ದೇಶಕ ಶ್ರೀಧರ್ ಅವರಿಗೆ ಯಾವುದೇ ತಾಂತ್ರಿಕ ಜ್ಞಾನ ಇಲ್ಲ. ಹೆದ್ಧಾರಿ ಕಾಮಗಾರಿ ಅವೈಜ್ಞಾನಿಕ ವಾಗಿ ನಿರ್ಮಾಣವಾಗಿದ್ದಕ್ಕೆ ಈತನೇ ಕಾರಣ. ಮಂಡ್ಯದ ಬೂದನೂರು ಬಳಿ ರಾಮನಗರ, ಬಿಡದಿ ಬಳಿ ಹೆದ್ದಾರಿಯಲ್ಲಿ 10-20 ಅಡಿ ನೀರು ನಿಂತು ವಾಹನಗಳು ಮುಳುಗಡೆ ಆಗಿದ್ದೆ ಕಳಪೆ ಕಾಮಗಾರಿಗೆ ಸಾಕ್ಷಿ. ಮೊದಲು ಈತನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದರು.