ಜನರಲ್ಲಿ ಜಾಗೃತಿ ಮೂಡಿಸಲು, ಕಾನೂನು ಅರಿವು ಹೆಚ್ಚಿಸಲು ಮಾಧ್ಯಮಗಳು ಅವಶ್ಯಕ, ಬೀದಿನಾಟಕ ಮೂಲಕ ಬಾಲಕಾರ್ಮಿಕ ವಿರೋಧಿ ಪದ್ದತಿ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಪರಿಣಾಮಕಾರಿ ಎಂದು ನ್ಯಾಯಾಧೀಶರಾದ ನಳಿನಿ ಕುಮಾರಿ ಹೇಳಿದರು.
ಮಂಡ್ಯ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಾನಪದ ಮತ್ತು ಬೀದಿ ನಾಟಕ ಕಲಾತಂಡಗಳ ಒಕ್ಕೂಟ ಇವರ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಬಾಲ್ಯ ಮತ್ತು ಕಿಶೋರ ವ್ಯವಸ್ಥೆ, ಕಾರ್ಮಿಕ ಪದ್ಧತಿ ವಿರುದ್ಧ ಜನಜಾಗೃತಿ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಮಿಕ ಇಲಾಖೆಯಿಂದ ಬಾಲ ಕಾರ್ಮಿಕ ಪದ್ದತಿ ವಿರೋಧಿಸಿ ಅರಿವು ಮೂಡಿಸಲಾಗುತ್ತಿದೆ, ಬೀದಿನಾಟಕಗಳ ಮೂಲಕ ಜಾಗೃತಿ ಹೆಚ್ಚಿಸಲಾಗುತ್ತಿದೆ, ಕಾನೂನು ವಿಚಾರಗಳನ್ನು ತಿಳಿಸಿಕೊಡುವುದು ಅವಶ್ಯಕ,14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಆರೋಗ್ಯ, ಬಾಲ್ಯವ್ಯವಸ್ಥೆ ಜೀವನ ನೀಡುವುದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಮಂಜುಳಾದೇವಿ, ತಾಲೂಕು ಕಾರ್ಮಿಕ ನಿರೀಕ್ಷಕಿ ನಾಗರತ್ನ, ಮಿಮ್ಸ್ ನಿರ್ದೇಶಕ ಡಾ.ಶ್ರೀಧರ್, ಮಮತೆಯ ಮಡಿಲು ನಿರ್ದೇಶಕ ಯೋಗೇಶ್, ಬೀದಿನಾಟಕ ಕಲಾವಿದರ ತಂಡದ ಸಂತೆಕಸಲಗೆರೆ ಬಸವರಾಜು, ಕಲಾವಿದರಾದ ಹನಿಯಂಬಾಡಿ ಶೇಖರ್, ರಾಮಕೃಷ್ಣ, ವೈರಮುಡಿ, ರೋಜ್ ಮೇರಿ, ಚನ್ನಮ್ಮ, ರಂಗನಾಥ್ ಹಾಜರಿದ್ದರು.