ಪೊಲೀಸರ ನಿಸ್ವಾರ್ಥ ಸೇವೆಯಿಂದ ದೇಶದ ಜನರು ಶಾಂತಿ-ನೆಮ್ಮದಿಯಿಂದ ಜೀವನ ಮಾಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ತಿಳಿಸಿದರು.
ಮಂಡ್ಯ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ರಾಷ್ಟ್ರದ ಆಂತರಿಕ ಭದ್ರತಾ ವ್ಯವಸ್ಥೆಗಾಗಿ ನಿಸ್ವಾರ್ಥದಿಂದ ಹಗಲಿರುಳು ಕಾರ್ಯನಿರ್ವಹಿಸುವ ಪೊಲೀಸ್ ಇಲಾಖೆಯ ಕಾರ್ಯ ಅಪ್ರತಿಮ ಎಂದು ಶ್ಲಾಘಿಸಿದರು.
ಜಮ್ಮು ಕಾಶ್ಮೀರದ ಲಡಾಕ್ ಗಡಿಪ್ರದೇಶದಲ್ಲಿ ವಿರೋಧಿ ರಾಷ್ಟ್ರದ ಸೈನಿಕರ ಆಕ್ರಮಣಕ್ಕೆ ಕಡಿವಾಣ ಹಾಕಲು ತಮ್ಮ ಜೀವವನ್ನು ಅರ್ಪಿಸಿದ ಪ್ರತಿಯೊಬ್ಬ ಯೋಧರು ಹಾಗೂ ಪೊಲೀಸರ ಬಲಿದಾನದ ಸ್ಮರಣಾರ್ಥ ಹುತಾತ್ಮರ ದಿನ ಆಚರಣೆ ನಡೆಯುತ್ತಿದ್ದು,ಇದರಲ್ಲಿ ಭಾಗವಹಿಸಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಇಂದು ದೇಶಾದ್ಯಂತ ಪೊಲೀಸ್ ಹುತಾತ್ಮ ದಿನ ಆಚರಿಸುತ್ತಿರುವುದಕ್ಕೆ ಮಂಡ್ಯ ಜಿಲ್ಲಾಡಳಿತವು ಗೌರವ ಸಲ್ಲಿಸುತ್ತದೆ. ಹಬ್ಬ, ಹರಿದಿನ ಹಾಗೂ ರಜಾ ದಿನಗಳಂದು ಹೆಚ್ಚಿನ ಸೇವೆಗೈಯುವ ಪೊಲೀಸ್ ಇಲಾಖೆಯ ಸೇವೆ ಅಡುಗೆಗೆ ಬಳಸುವ ಉಪ್ಪಿನಂತೆ ಮಹತ್ವವುಳ್ಳದ್ದು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು. ಹಲವು ಸಂಘ ಸಂಸ್ಥೆಗಳ ಮುಖಂಡರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂ ಗುಚ್ಛ ಅರ್ಪಿಸಿದರು.
ಹುಸಿಗುಂಡು ಹಾರಿಸಿ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು. ಪೊಲೀಸ್ ಪಥಸಂಚಲನ ನಡೆಸಿದರು.