ದಿನಾಂಕ 28.02.2022 ರಂದು ಮಂಡ್ಯ ಗ್ರಾಮದ ಸರ್ವೆ ನಂ. 178/8ರ ಕ್ರಯಕ್ಕೆ ಪಡೆದ ಮೂರು ಗುಂಟೆ ಜಮೀನನ್ನು ಕ್ರಯದಾರರಿಗೆ ಉಚ್ಚ ನ್ಯಾಯಲಯದ ಆದೇಶದಂತೆ ಮಂಡ್ಯ ತಹಶೀಲ್ದಾರ್ ಖಾತೆ ಮಾಡಿಕೊಟ್ಟಿದ್ದಾರೆ, ಇದನ್ನು ತಡೆಯಿಡಲು ಸಾಧ್ಯವಿಲ್ಲದ ಕಾರಣ, ಅವರಿಗೆ ಕ್ರಯದಂತೆ ಖಾತೆ ನೋಂದಾವಣೆ ಮಾಡಿಕೊಟ್ಟಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಪೂರಕ ದಾಖಲಾತಿಗಳು (ದೃಢೀಕೃತ ದಾಖಲಾತಿ) ತಮ್ಮ ಬಳಿ ಇವೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ಶಂಭೂನಹಳ್ಳಿ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ತಾಲ್ಲೂಕಿನ ತಹಶೀಲ್ದಾರ್ ಮಹಮದ್ ಕುಂಞ ಅವರು ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅವರ ಮೇಲೆ ಕೆಲವು ಭಟ್ಟಭದ್ರ ಹಿತಾಶಕ್ತಿಗಳು ಆರೋಪ ಮಾಡಿ, ಅವರ ನೈತಿಕತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು.
ಅಕ್ರಮ ಖಾತೆ ಆರೋಪ ಪ್ರಕರಣದಲ್ಲಿ ತಹಶೀಲ್ದಾರ್ ಮಹಮದ್ ಕುಂಞ ಅವರ ಪಾತ್ರ ಯಾವುದು ಇಲ್ಲ, ಕ್ರಮವಾದ ಜಮೀನನ್ನು ಕಾನೂನು ಪ್ರಕಾರವೇ ಖಾತೆ ಮಾಡಿದ್ಧಾರೆ. ಈ ಹಿಂದೆ ಆ ಜಮೀನು ಯಾರಿಂದ, ಯಾರಿಗೆ ಬಂದಿದೆ ಎನ್ನುವ ಬಗ್ಗೆ ತಕರಾರುಗಳಿದ್ದರೆ, ಅದರ ಬಗ್ಗೆ ತನಿಖೆ ನಡೆಯಲಿ, ಅದಕ್ಕೆ ನಮ್ಮ ಸಮ್ಮತಿ ಇದೆ. ಆದರೆ ವಿನಃ ಕಾರಣ ಒಬ್ಬ ಪ್ರಾಮಾಣಿಕ ಅಧಿಕಾರಿಯ ಮೇಲೆ ಆರೋಪ ಹೊರಿಸುತ್ತಿರುವುದು ದುರುದ್ದೇಶದಿಂದ ಕೂಡಿದೆ ಎಂದು ಸ್ಟಷ್ಟಪಡಿಸಿದರು.
ನಾನೊಬ್ಬ ರೈತ ಹಾಗೂ ಹೋರಾಟಗಾರನಾಗಿ ಮಹಮದ್ ಕುಂಞ ಅವರು ಅಧಿಕಾರ ವಹಿಸಿಕೊಂಡ ನಂತರ ಬೂದನೂರು ಗ್ರಾಮದ ನಿರ್ಗತಿಕರ ವಸತಿಗಾಗಿ ಎರಡು ಎಕರ ಜಾಗ ಮಂಜೂರು ಮಾಡಿದ್ದಾರೆ, ಮಂಡ್ಯ ಕೆರೆ ಅಂಗಳದಲ್ಲಿ ಅತಿಯಾದ ಮಳೆಯಾದ ತಕ್ಷಣ ರಾತ್ರಿ ಹಗಲು ಎನ್ನದೇ ಸರ್ಕಾರದಿಂದ ಸೌಲಭ್ಯ ಒದಗಿಸುವ ಜೊತೆಗೆ, ಅಲ್ಲಿನ ಜನರ ಸಂಕಷ್ಟಕ್ಕೆ ಅವರಿಗೆ ಸ್ಪಂದಿಸಿ ಪರಿಹಾರ ಮಾಡಿಕೊಟ್ಟಿದ್ದಾರೆ. ಅಂತಹ ವ್ಯಕ್ತಿಯ ತೇಜೋವಧೆ ಮಾಡುವ ಕೆಲಸ ನಡೆಯುತ್ತಿರುವುದು ಸರಿಯಲ್ಲ ಎಂದರು.
ಗೋಷ್ಠಿಯಲ್ಲಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಸತೀಶ್, ಮುಖಂಡರಾದ ಬೋರೇಗೌಡ ಹಾಗೂ ಅಶೋಕ್ ಉಪಸ್ಥಿತರಿದ್ದರು.