ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು, ಇವುಗಳನ್ನು ದುರಸ್ತಿಪಡಿಸಲು ಜಿಲ್ಲಾಡಳಿತ ಹಾಗೂ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದ್ದು, ಇದರ ವಿರುದ್ಧ ಅ.28ರಂದು ಮಂಡ್ಯ ನಗರದಾದ್ಯಂತ ಬೈಕ್ ರ್ಯಾಲಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ನಗರವು ಸಕ್ಕರೆ ನಗರ ಎಂದು ಪ್ರಖ್ಯಾತಿ ಪಡೆದಿದ್ದು, ರಾಷ್ಟ್ರಮಟ್ಟದಲ್ಲಿ ಮನ್ನಣೆಗಳಿಸಿದೆ. ಆದರೆ ಇತ್ತಿಚೀನ ಕೆಲವು ವರ್ಷಗಳಿಂದ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅದಕ್ಷ ಅಧಿಕಾರಿಗಳ ಅಸಮರ್ಥತೆಯಿಂದಾಗಿ ಮಂಡ್ಯನಗರವು ಹಾಳು ಕೊಂಪೆಯಂತಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿಗಳು, ಚರಂಡಿ ಕಟ್ಟಿಕೊಂಡಿದ್ದು, ಯುಜಿಡಿ ಮ್ಯಾನ್ ಹೋಲ್ ನಿಂದ ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿದೆ ಎಂದು ದೂರಿದರು.
ಮಂಡ್ಯ ನಗರದ ಶೇ.90 ರಸ್ತೆಗಳು ಗುಂಡಿಗಳಾಗಿ ಪರಿರ್ವತನೆಗೊಂಡಿವೆ, ನಗರದ ಎಲ್ಲಾ ಪಾರ್ಕ್ ಗಳು ಮೂಲಭೂತ ಸೌಕರ್ಯಗಳಿಲ್ಲದೇ ಬಳಲುತ್ತಿದೆ, ಮಂಡ್ಯ ನಗರದ ಹೊಸದಾಗಿ ನಿರ್ಮಾಣಗೊಡಿರುವ ಬಡಾವಣೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ, ಮಂಡ್ಯ ನಗರದ ಬಡಾವಣೆಗಳಿಗೆ ಅಸಮರ್ಪಕ ನೀರು ಪೂರೈಕೆ ಮಾಡುತ್ತಿದ್ದು, ಹೆಚ್ಚಿನ ದರ ವಿಧಿಸುತ್ತಿದ್ದು, ನಗರಸಭೆಯ ವೈಫಲ್ಯದ ಪರಿಣಾಮದಿಂದಾಗಿ ಮಂಡ್ಯ ನಗರವು ಅವ್ಯವಸ್ಯೆಗಳ ಬೀಡಾಗಿದೆ ಎಂದು ಆರೋಪಿಸಿದರು.
ಅಸಮರ್ಥ ಶಾಸಕರು, ಬೇಜವಾಬ್ಯಾರಿಯುತ ಜಿಲ್ಲಾ ಮಂತ್ರಿಗಳು, ನಗರಸಭೆ ಆಡಳಿತ ಮತ್ತು ನಗರಸಭೆ ಅಧಿಕಾರಿಗಳು ತಮ್ಮ ಸ್ವಹಿತಾಸಕ್ತಿಯಲ್ಲಿ ತೊಡಗಿ, ಮಂಡ್ಯ ನಗರವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಲು ಕಾರಣಕರ್ತರಾಗಿದ್ಧಾರೆ. ಅಸಮರ್ಥ ಜಿಲ್ಲಾ ಉಸ್ತುವಾರಿ ಸಚಿವರ ಉದಾಸೀನತೆ ಹಾಗೂ ನಗರ ಸಭೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವನ್ನು ಮಂಡ್ಯ ನಗರದಾದ್ಯಂತ ಬೈಕ್ ರಾಲಿಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಬೈಕ್ ರಾಲಿಯು ಮಂಡ್ಯ ನಗರದ ಅರ್ಕೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಅಂತಿಮವಾಗಿ ವಿ.ವಿ.ರಸ್ತೆಯ ನಗರಸಭೆ ವೃತ್ತದಲ್ಲಿ ಜಮಾವಣೆಗೊಂಡು ನಗರಸಭಾ ಆಯುಕ್ತರಿಗೆ ಒತ್ತಾಯ ಪತ್ರ ನೀಡಲಾಗುವುದು, ನಾಳೆ ಮಂಡ್ಯ ನಗರಸಭೆಯ ಸಾಮಾನ್ಯ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ನಗರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಪ್ರಶ್ನೆ ಮಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ರೈತಸಂಘದ ಯುವ ಘಟಕದ ಮುಖಂಡರಾದ ಶಿವಳ್ಳಿ ಚಂದ್ರಶೇಖರ್, ರಾಘವೇಂದ್ರ ಹೆಚ್.ಎಂ., ರಾಘವೇಂದ್ರ ಎಚ್.ಎಂ., ಆದಿತ್ಯಗೌಡ, ಮಂಜೇಶ್, ಪ್ರದೀಪ್ ಹಾಗೂ ಶ್ರೀನಿವಾಸ್ ಉಪಸ್ಥಿತರಿದ್ದರು.