ನಾಗಮಂಗಲ ಪುರಸಭಾ ಸದಸ್ಯರಾದ ಇಂದಿರಾ ಕುಮಾರ್ ಅವರ ನಿಧನದಿಂದ ತೆರವಾಗಿದ್ದ 3ನೇ ವಾರ್ಡ್ ಗೆ ಇಂದು ಉಪಚುನಾವಣೆ ನಡೆಯಿತು.
518 ಮತಗಳಿದ್ದ ಕ್ಷೇತ್ರದಲ್ಲಿ 459 ಮಂದಿ ಮತಚಲಾಯಿಸುವ ಮೂಲಕ ಶೇ 88.61 ಮತದಾನ ನಡೆಯಿತು.
ಪ್ರತಿ ದಿನ ಮತದಾರರ ಮನೆಬಾಗಿಲಿಗೆ ಎಡತಾಕಿದ್ದ ಕಾಂಗ್ರೆಸ್,ಜೆಡಿಎಸ್,ಬಿಜೆಪಿ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರು ಮತದಾರರ ಮನವೊಲಿಸಲು ಯತ್ನಿಸಿದ್ದರು. ಮನೆಗಳಿಗೆ ಒಂದೊಂದು ಕುಕ್ಕರ್, ಇಂಡಕ್ಷನ್ ಸ್ಟೋವ್, ಪ್ರಚಾರದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಚಿಕನ್ ಬಿರಿಯಾನಿ, 500ರೂ ನೀಡಲಾಗಿತ್ತು.
ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದಂತೆ ಜಾಗೃತರಾದ ಪಕ್ಷಗಳ ಮುಖಂಡರು ಮತದಾರರ ಮನೆ ಬಾಗಿಲಿಗೆ ಎಡತಾಕಿ ಜೆಡಿಎಸ್ ಪಕ್ಷದವರು ಕುಕ್ಕರ್ ನೀಡಿದರೆ, ಕಾಂಗ್ರೆಸ್ ಪಕ್ಷದವರು ಎಲೆಕ್ಟ್ರಿಕ್ ಸ್ಟೋವ್ ನೀಡಿ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದ್ದರು.
ಚುನಾವಣೆ ಮುನ್ನಾ ದಿನವಾದ ಗುರುವಾರ ಒಂದು ಪಕ್ಷ ಪ್ರತಿ ಮತದಾರರಿಗೆ 5 ರಿಂದ 10 ಸಾವಿರ ರೂಗಳ ವರೆಗೆ ನೀಡಿದರೆ, ಮತ್ತೊಂದು ಪಕ್ಷ 3 ರಿಂದ 5 ಸಾವಿರ ರೂಗಳವರೆಗೆ ನೀಡಿದ್ದಾರೆಂಬುದು ಮತದಾರರೇ ಬಹಿರಂಗ ಪಡಿಸಿದರು. ಇದಲ್ಲದೆ ಬೆಳ್ಳಿಯ ದೀಪಗಳ ಹಂಚಿಕೆಯು ನಡೆದಿತ್ತು.
ಕಾಂಗ್ರೆಸ್ ಪಕ್ಷದಿಂದ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮೀರಂಗಪ್ಪ ಸ್ಪರ್ಧಿಸಿದ್ದರೆ, ಜೆಡಿಎಸ್ ಪಕ್ಷದಿಂದ ಹೊಸಮುಖ ಸೌಮ್ಯ ತಿರುಮಲಯ್ಯ ಬಿಜೆಪಿಯಿಂದ ಶಶಿಕಲಾ ಚಂದ್ರಚಾರ್ ಸ್ಪರ್ಧಿಸಿದ್ದಾರೆ.
ಮತದಾರರ ಪಟ್ಟಿಯ ಗೊಂದಲ
ಮತದಾರರ ಪಟ್ಟಿಯಲ್ಲಿ ಗಂಡನ ಹೆಸರಿದ್ದರೆ, ಹೆಂಡತಿ ಹೆಸರಿಲ್ಲ, ಮತ್ತೊಂದರಲ್ಲಿ ಹೆಂಡತಿ ಹೆಸರಿದ್ದು ಗಂಡನ ಹೆಸರಿಲ್ಲ. ಬೇರೆ ಬೇರೆ ವಾರ್ಡ್ ಗಳ 60 ರಿಂದ 70 ಓಟುಗಳು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದರೆ, ಸುಮಾರು 50 ಮತಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಆರೋಪಿಸಿದರು.
ವಕೀಲ ಎನ್.ಆರ್.ಚಂದ್ರಶೇಖರ್ ಅವರ ಹೆಸರು ಪಟ್ಟಿಯಲ್ಲಿದ್ದರೆ, ಅವರ ಹೆಂಡತಿ ಹೆಸರು ಮಾಯವಾಗಿತ್ತು, ಅಂತೆಯೇ ವಕೀಲರ ತಮ್ಮನ ಹೆಸರು ಪಟ್ಟಿಯಿಂದ ಮಾಯವಾಗಿದ್ದರೆ, ಆತನ ಹೆಂಡತಿ ಹೆಸರು ಪಟ್ಟಿಯಲ್ಲಿತ್ತು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಚಂದ್ರಶೇಖರ್ ಚುನಾವಣಾಧಿಕಾರಿ ಭಾಸ್ಕರ್ ಅವರೊದಿಗೆ ತೀವ್ರ ವಾಗ್ವಾದ ನಡೆಸಿದ್ದಲ್ಲದೆ, ಪುರಸಭೆ ಮುಖ್ಯಾಧಿಕಾರಿ ಅಮೃತ ಅವರೊಂದಿಗೂ ಮಾತಿನ ಚಕಮಕಿ ನಡೆಸಿದರು.
ಈ ನಡುವೆ ಮಧ್ಯೆ ಪ್ರವೇಶಿಸಿದ ಸಬ್ ಇನ್ಸ್ ಪೆಕ್ಟರ್ ರವಿಶಂಕರ್ ಪರಿಸ್ಥಿತಿಯನ್ನು ತಹಬಂದಿಗೆ ತಂದರು.
ಎರಡು ಪಕ್ಷಗಳ ಮುಖಂಡರು ಆಗಾಗ ತಮ್ಮ ಅಭ್ಯರ್ಥಿಗಳ ಪರ ಜೈಕಾರ ಹಾಕುತ್ತ ಮತದಾರರನ್ನು ಓಲೈಸಲು ಪ್ರಯತ್ನಿಸುತ್ತಿದ್ದದ್ದು ಕಂಡು ಬಂತು. ಮತದಾರರಿಗಿಂತ ಮುಖಂಡರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಚುನಾವಣಾಧಿಕಾರಿ ಭಾಸ್ಕರ್, ಪುರಸಭೆ ಮುಖ್ಯಾಧಿಕಾರಿ ಅಮೃತ ಚುನಾವಣೆ ಶಾಂತಿಯುತವಾಗಿ ನಡೆಯಲು ಶ್ರಮಿಸಿದರು. ಪಟ್ಟಣ ಠಾಣೆ ಸಬ್ ಇನ್ಸ್ ಪೆಕ್ಟರ್ ರವಿಶಂಕರ್