ಡಾ.ಬಿ.ಆರ್. ಅಂಬೇಡ್ಕರ್ ರವರು ಬರೆದ ಉತ್ತಮ ಸಂವಿಧಾನವನ್ನು ಆಳುವ ಸರ್ಕಾರಗಳು ಸರಿಯಾದ ಮಾರ್ಗದಲ್ಲಿ ಅನುಷ್ಠಾನ ಗೊಳಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿ ಎಸ್ ಪಿ ಪಕ್ಷದಿಂದ ಸಂವಿಧಾನ ಸಂರಕ್ಷಣೆಗಾಗಿ ಜೈ ಭೀಮ್ ಜನಜಾಗೃತಿ ಜಾಥಾ ನಡೆಯುತ್ತಿದೆ ಎಂದು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ವೆಂಕಟೇಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬೇಡ್ಕರ್ ರವರು ಸಂವಿಧಾನ ರಚಿಸುವ ಮೂಲಕ ಸಮಸಮಾಜದ ನಿರ್ಮಾಣವನ್ನು ಬಯಸಿದ್ದರು. ಆದರೆ ಸಂವಿಧಾನ ಜಾರಿಗೆ ಬಂದು 70 ವರ್ಷ ಕಳೆದಿದ್ದರೂ ಬಡತನ ಹೋಗಿಲ್ಲ, ಶ್ರೀಮಂತಿಕೆ ಹೆಚ್ಚಾಗಿದೆ, ಎಲ್ಲರಿಗೂ ಕೆಲಸ ಮಾಡಲು ಉದ್ಯೋಗ ಸಿಗುತ್ತಿಲ್ಲ ಈ ಬಗ್ಗೆ ಜನತೆ ವಿಮರ್ಶೆ ಮಾಡಬೇಕಾಗಿದೆ ಎಂದರು.
70 ವರ್ಷವಾದರೂ ಆಳ್ವಿಕೆ ಮಾಡಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಬಾಬಾ ಸಾಹೇಬರ ಸಂವಿಧಾನವನ್ನು ಜಾರಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಅಸ್ಪೃಶ್ಯತೆ, ಜಾತೀಯತೆ ತಾಂಡವಾಡುತ್ತಿದೆ. ಆರ್ಥಿಕ ಅಸಮಾನತೆ ಇದೆ, ಬಡತನ ಹೋಗಲಾಡಿಸುತ್ತೇವೆ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎನ್ನುವ ಬಿಜೆಪಿ ಸರ್ಕಾರ ಯಾವುದನ್ನು ಮಾಡಿಲ್ಲ. ಸೌಮ್ಯ ಮನುವಾದಿ ಕಾಂಗ್ರೆಸ್, ಉಗ್ರ ಮನುವಾದಿ ಬಿಜೆಪಿ ಸರ್ಕಾರಗಳು ಜನರನ್ನು ವಂಚಿಸುತ್ತಿವೆ. ಜನರು ಸಂಪಾದನೆ ಮಾಡಿದ ಹಣ ಉಳಿಸಲು ಆಗುತ್ತಿಲ್ಲ. ಶ್ರೀಮಂತ ಬಂಡವಾಳಶಾಹಿಗಳ 75 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಸರ್ಕಾರ ರೈತರ ಸಾಲ ಮನ್ನಾ ಮಾಡಲು ವಿಫಲವಾಗಿದೆ ಎಂದರು.
ಸಂವಿಧಾನವನ್ನು ಬದಲಾಯಿಸಲು ಹೊರಟಿರುವ, ವರ್ಣಾಶ್ರಮ ನೀತಿಯನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ಸರ್ಕಾರದ ವಿರುದ್ಧ ಬಿ ಎಸ್ ಪಿ ಜನಜಾಗೃತಿ ಜಾಥಾ ಹಮ್ಮಿಕೊಂಡಿದೆ ಎಂದರು.
ನವೆಂಬರ್ 5 ರಂದು ಜೈ ಭೀಮ್ ಜನಜಾಗೃತಿ ಜಾಥಾ ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿದ್ದು, ನವೆಂಬರ್ 5 ರಂದು ಮಧ್ಯಾಹ್ನ 3 ಗಂಟೆಗೆ ಜಾಥಾ ಮಂಡ್ಯ ನಗರಕ್ಕೆ ಬರಲಿದ್ದು, ಬಿ ಎಸ್ ಪಿ ರಾಜ್ಯಾಧ್ಯಕ್ಷ ಎಮ್ ಕೃಷ್ಣಮೂರ್ತಿ, ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮುಖಂಡರಾದ ಅಶೋಕ್ ಸಿದ್ದಾರ್ಥ, ದಿನೇಶ್ ಗೌತಮ್ ಮತ್ತಿತರರು ಮಾತನಾಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಚಲುವರಾಜ್, ಶಿವಶಂಕರ್, ರವಿ ಗೌಡ್ರು, ರೋಹಿತ್ ಅನಿಲ್ ಕುಮಾರ್ ಉಪಸ್ಥಿತರಿದ್ದರು.