ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನವೆಂಬರ್ 7 ರಂದು ಶಾಲೆಗೆ ದಾಖಲಾಗಿದ್ದು, ಈ ದಿನ ಮಂಡ್ಯ ಜಿಲ್ಲೆಯಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ. ನ.7 ಅನ್ನು ಪೌರಕಾರ್ಮಿಕರ ಮಕ್ಕಳ ವಿದ್ಯಾರ್ಥಿ ದಿನ ಎಂದು ಘೋಷಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ (ಕೋಟೆ) ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಎಂ.ಎಸ್. ಕಾಯ್ದೆ 2013 ರಂತೆ ಸಫಾಯಿ ಕರ್ಮಚಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಂಡ್ಯ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಜಿಲ್ಲೆಗಳಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳ ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಪೌರಕಾರ್ಮಿಕರ ಮಕ್ಕಳು ತಲಾತಲಾಂತರದಿಂದ ಅವರ ಕುಟುಂಬ ನಡೆಸುತ್ತಿರುವ ಪೌರಕಾರ್ಮಿಕ ಕೆಲಸವನ್ನು ಮುಂದುವರಿಸಿಕೊಂಡು ಹೋಗುವುದರ ಬದಲು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ. ಪೌರಕಾರ್ಮಿಕ ವೃತ್ತಿಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಉತ್ತಮ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಸಲಹೆ ನೀಡಿದರು.
ಇಂದು ಎಸ್.ಎಸ್.ಎಲ್.ಸಿ ಪ್ರತಿಭಾನ್ವಿತ ಮಕ್ಕಳನ್ನು ಮಾತ್ರ ಸನ್ಮಾನಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪೌರಕಾರ್ಮಿಕರ ಎಸ್.ಎಸ್.ಎಲ್.ಸಿಯಿಂದ ಮೇಲ್ಪಟ್ಟು ಎಲ್ಲಾ ಹಂತದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳನ್ನು ಸನ್ಮಾಸಿಲಾಗುವುದು ಎಂದರು.
ನಗರ ಸ್ಥಳೀಯ ಸಂಸ್ಥೆಯ ಪ್ರತಿಭಾವಂತ ಪೌರಕಾರ್ಮಿಕ ಮಕ್ಕಳಾದ ವಿನೋದ್ ಜಿ., ವಿನಯ ಸಿ., ಗೌರಿ, ಸಂಧ್ಯಾ ಸಿ., ವೀಣಾ ಎಂ.ಪಿ., ಹೇಮಾವತಿ ಎಂ.ಪಿ. ಅಕ್ಷಯ, ಕಾವ್ಯ ಜಿ., ಮೋಹನ್ ಪಿ., ಮಹಾಲಕ್ಷ್ಮಿ ಕೆ., ನಿತಿನ್ ಕೆ.ಸಿ., ವಿಕಾಸ್ ಕೆ.ಆರ್, ಸಂಧ್ಯಾ ಆರ್/, ನಿಶಾ ಕೆ., ಕವನ ಎ., ಪದ್ಮವತಿ, ದಿವಾಕರ ಆರ್., ಲಿಖಿತ್ ಟಿ.ಆರ್., ನವೀನ್ ಎಸ್., ಪಲ್ಲವಿ ಎಸ್., ವಿನಯ್ ಎಸ್., ಪ್ರಜ್ವಲ್ ಎಸ್., ಚಂದ್ರಿಕ ಎನ್., ಒಟ್ಟು 23 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಗ್ರಾಮೀಣ ಭಾಗದ ಸ್ವಚ್ಛಾತಾಗಾರರ ಪ್ರತಿಭಾವಂತ ಮಕ್ಕಳಾದ ಗೌತಮ್ ಆರ್, ಕಾವ್ಯಶ್ರೀ ಎಸ್, ಅಪೇಕ್ಷ ಎಂ.ಎನ್, ಗೀತಾಂಜಲಿ, ಎಂ.ಜಿ ಯೋಗೇಶ್, ಚಂದನ, ಹೇಮ ಕೆ, ಅಭಿಲಾಷ ಬಿ.ಎಸ್, ಪುಷ್ಪ ಕೆ, ಹೇಮಂತ್ ಕುಮಾರ್, ಅರುಣ್ ಕುಮಾರ್, ಕೀರ್ತನಾ, ಜ್ಯೋತಿ, ಕಾವೇರಿ ಸಿ.ಎಂ ಹಾಗೂ ರಮ್ಯ ಹೆಚ್. ಎನ್ ಸೇರಿದಂತೆ ಒಟ್ಟು 15 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮ್ಯಾನುಯಲ್ ಸ್ಕ್ಯಾವೆಂಜರ್ ನಿರ್ಮೂಲನೆ ಬಗ್ಗೆ ನಾಟಕ ಪ್ರದರ್ಶನ ನಡೆಯಿತು. ಐರಾವತ ಯೋಜನೆಯಡಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ವತಿಯಿಂದ ಇಬ್ಬರೂ ಫಲಾನುಭವಿಗಳಿಗೆ ಕಾರ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಹೆಚ್.ಎಸ್. ಮಂಜು ಉಪಾಧ್ಯಕ್ಷೆ ಇಷ್ರತ್ ಫಾತೀಮಾ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್. ಹುಲ್ಮನಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಂಗೇಗೌಡ, ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕುಮಾರಸ್ವಾಮಿ, ಮುಖಂಡರಾದ ಕೃಷ್ಣ, ನಂಜುಂಡ ಮೌರ್ಯ, ಎನ್.ಆರ್.ಚಂದ್ರಶೇಖರ್, ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.