ಮಂಡ್ಯ ತಾಲೂಕು ಕಚೇರಿ ಮುಂದೆ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನ ರಹಿತ ರೈತ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಜೆಡಿಎಸ್ ವಕ್ತಾರ, ಮುಖಂಡ ಮಹಾಲಿಂಗೇಗೌಡ ಮುದ್ದನಘಟ್ಟ ಭೇಟಿ ನೀಡಿ ನಿವೇಶನ ರಹಿತರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಕಳೆದ ಐದು ವರ್ಷಗಳಿಂದ ನಿರಂತರವಾಗಿ ಸ್ವಂತ ಮನೆ ನಮ್ಮ ಹಕ್ಕು ಎಂಬ ಘೋಷ ವಾಕ್ಯದಡಿ ಹೋರಾಟ ಮಾಡುತ್ತಿರುವ ಬೂದನೂರು ಗ್ರಾ.ಪಂ ವ್ಯಾಪ್ತಿಯ ನಿವೇಶನ ರಹಿತ ಜನರ ಹೋರಾಟಕ್ಕೆ ನಾನು ನೈತಿಕ ಬೆಂಬಲ ನೀಡುತ್ತೇನೆ. ಕೂಡಲೇ ಜಿಲ್ಲಾ, ತಾಲ್ಲೂಕು ಆಡಳಿತ ಮಧ್ಯಪ್ರವೇಶಿಸಿ ಅಲ್ಲಿನ ರೈತರು ಮತ್ತು ನಿವೇಶನ ರಹಿತ ಜನರ ಜೊತೆ ಒಮ್ಮತ ಮೂಡಿಸಿ ಯಾರಿಗೂ ಅನ್ಯಾಯವಾಗದ ರೀತಿ ಬಗೆಹರಿಸಬೇಕೆಂದು ತಹಶೀಲ್ದಾರ್ ಕುಂಇ ಅಹಮದ್ ಅವರಿಗೆ ಒತ್ತಾಯಿಸಿದರು.
ತಹಶೀಲ್ದಾರ್ ಕುಂಇ ಅಹಮದ್ ಅವರಿಗೆ ವಾಸ್ತವ ಸಂಗತಿ ಮನವರಿಕೆ ಮಾಡು ಮುಖಾಂತರ ಇಂಥ ಗಂಭೀರ ಸ್ವರೂಪದ ಹೋರಾಟ ಪ್ರಕರಣಗಳಿಗೆ ಮುಕ್ತಿ ನೀಡಿ ಬಗೆಹರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ವೆಂಕಟೇಶ್, ಮೋಹನ್, ಶಶಿಕುಮಾರ್, ಹೋರಾಟಗಾರ ಬಿ.ಕೆ ಸತೀಶ್ ಸೇರಿದಂತೆ ಇತರರಿದ್ದರು.