ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಮತ್ತು ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಿಗ್ಗೆ ಚಾಲನೆ ನೀಡಿದರು.
ಶಾಸಕರ ಭವನದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ, ವಂದೇ ಭಾರತ್ ರೈಲು ಏರಿ ವೀಕ್ಷಿಸಿದರು. ಬಳಿಕ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಕರ್ನಾಟಕ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಚಾಲನೆ ನೀಡಿದರು.
ಎಂಟು ದಿನ ಪ್ರವಾಸದ ಕಾಶಿ ದರ್ಶನ್ ರೈಲು
ಭಾರತ್ ಗೌರವ್ ಕಾಶಿ ದರ್ಶನ್ ರೈಲು ಎಂಟು ದಿನಗಳ ಪ್ರವಾಸದಲ್ಲಿ ಕಾಶಿ, ಅಯೋಧ್ಯೆ, ಪ್ರಯಾಗ್ರಾಜ್ ಕ್ಷೇತ್ರಗಳಿಗೆ ಯಾತ್ರಿಗಳನ್ನು ಕೊಂಡೊಯ್ಯಲಿದೆ. ಇಂದು ಬೆಂಗಳೂರಿನಿಂದ ಹೊರಟ ರೈಲು ನ.18ಕ್ಕೆ ಮತ್ತೆ ಬೆಂಗಳೂರಿಗೆ ಬರಲಿದೆ. ರೈಲಿನಲ್ಲಿ ಪ್ರಯಾಣಿಸಲು ಪ್ರತಿ ಪ್ರಯಾಣಿಕರಿಗೆ 7,20,000 ಟಿಕೆಟ್ ದರ ವಿಧಿಸಲಾಗಿದೆ. ಈ ಪೈಕಿ ಕರ್ನಾಟಕ ಸರ್ಕಾರವು 75 ಸಾವಿರ ಸಬ್ಸಿಡಿ ಒದಗಿಸುತ್ತದೆ.
ವಾರಣಾಸಿಯಲ್ಲಿ ತುಳಸಿ ಮಾನಸ ದೇಗುಲ, ಸಂಕಟಮೋಚನ ಹನುಮಾನ್ ದೇಗುಲ, ಕಾಶಿ ವಿಶ್ವನಾಥ ದೇವಾಲಯ ಮತ್ತು ಗಂಗಾರತಿ, ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ದೇಗುಲ, ಹನುಮಾನ್ ಗಡಿ, ಸರಯೂ ಘಾಟ್ ಪ್ರಯಾಗ್ ರಾಜ್ನಲ್ಲಿ ಗಂಗಾ-ಯಮುನಾ ಸಂಗಮ, ಹನುಮಾನ್ ದೇಗುಲಗಳನ್ನು ಈ ಪ್ರಯಾಣದಲ್ಲಿ ನೋಡಬಹುದಾಗಿದೆ.