ಮಂಡ್ಯದಲ್ಲಿ ನಿವೃತ್ತ ಯೋಧ ರಸ್ತೆ ಗುಂಡಿಗೆ ಬಲಿಯಾಗಿ ಮೂರು ದಿನ ಕಳೆದರೂ ಲೋಕೋಪಯೋಗಿ ಇಲಾಖೆ ರಸ್ತೆ ಗುಂಡಿ ಮುಚ್ಚಿಸಿಲ್ಲ. ಈ ಹಿನ್ನಲೆಯಲ್ಲಿ ಇಂದು ಭಜರಂಗಸೇನೆ ಕಾರ್ಯಕರ್ತರು ರಸ್ತೆ ಗುಂಡಿ ಮುಚ್ಚಿಸುವ ಮೂಲಕ ವಿನೂತನ ಅಣಕು ಪ್ರತಿಭಟನೆ ನಡೆಸಿದರು.
ಭಜರಂಗ ಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ನೇತೃತ್ವದಲ್ಲಿ ಮಂಡ್ಯದ ಕಾರಿಮನೆ ಗೇಟ್ ಬಳಿ ರಸ್ತೆಯಲ್ಲಿ ನಾಲ್ಕು ಜಲ್ಲಿ, ಡಸ್ಟ್ ಹಾಕಿ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚುವ ಮೂಲಕ ಸರ್ಕಾರ, ಜನಪ್ರತಿನಿಧಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಭಾನುವಾರ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ನಿವೃತ್ತ ಯೋಧ ಸಾತನೂರು ಗ್ರಾಮದ ಎಸ್.ಎನ್.ಕುಮಾರ್ ಅವರು ಬೈಕ್ ನಿಂದ ಬಿದ್ದಾಗ ಹಿಂದಿನಿಂದ ಲಾರಿ ಹರಿದು ಸಾವನ್ನಪ್ಪಿದ್ದರು. ಇದು ಸರ್ಕಾರವೇ ಮಾಡಿದ ಕೊಲೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೆಂಟ್ರಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಭಜರಂಗ ಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ತಿಳಿಸಿದರು.
ಜನರು ಸರ್ಕಾರವನ್ನು ನಂಬಿ ಕೂರದೆ ತಮ್ಮ ಭಾಗದ ಗುಂಡಿಗಳನ್ನ ಮುಚ್ಚಲು ಮುಂದಾಗಬೇಕು. ಜನರಿಗೆ ಜಾಗೃತರಾಗಿ ರಸ್ತೆ ಗುಂಡಿಗಳನ್ನು ಮುಚ್ಚಿಸುವಂತೆ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕಬೇಕು. ನಮ್ಮ ಸಂಘಟನೆ ವತಿಯಿಂದ ಲೋಕೋಯೋಗಿ ಇಲಾಖೆಯ ಎಇಇ ಲೋಕೇಶ್ ಹಾಗೂ ಎಇ ಭಾಸ್ಕರ್ ಅವರ ವಿರುದ್ಧ ಇಂದು ಸೆಂಟ್ರಲ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.