ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ನಗರದ ಅಭಿವೃದ್ಧಿ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಲು ನೀಡಿದ್ದ 50 ಕೋಟಿ ರೂ.ಗಳ ಅನುದಾನವನ್ನು ಬಿಜೆಪಿಯು ಅಧಿಕಾರಕ್ಕೆ ಬಂದ ನಂತರ ವಾಪಸ್ ಪಡೆಯಿತು, ಇದರಿಂದಾಗಿ ಇತ್ತಿಚೇಗೆ ಮಂಡ್ಯದಲ್ಲಿ ಮಾಜಿ ಸೈನಿಕರೊಬ್ಬರು ರಸ್ತೆ ಗುಂಡಿಗೆ ಬಿದ್ದು ಬಲಿಯಾಗಿದ್ದಾರೆಂದು ಜೆಡಿಎಸ್ ಪಕ್ಷ ಆರೋಪಿಸಿದೆ.
ರಸ್ತೆ ಗುಂಡಿಗೆ ಬಿದ್ದು ಸಾವನ್ನಪ್ಪಿದ ನಿವೃತ್ತ ಯೋಧ ಸಾತನೂರು ಗ್ರಾಮದ ಎಸ್.ಎನ್.ಕುಮಾರ್ ಅವರ ಕುಟುಂಬಕ್ಕೆ ಇಂದು ಮಂಡ್ಯ ಜಿಲ್ಲಾ ಜೆಡಿಎಸ್ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಅವರು ಆರ್ಥಿಕ ನೆರವು ವಿತರಿಸಿ ಮಾತನಾಡಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಈ ದೇಶ ಕಾದ ಯೋಧ, ಈ ದೇಶದ ರಕ್ಷಣೆಗೆ ಹೋರಾಟ ಮಾಡಿದ ನಿವೃತ್ತ ಸೈನಿಕ ಮಂಡ್ಯ ತಾಲೂಕಿನ ಮಣ್ಣಿನ ಮಗ,ಕೆಟ್ಟ ಸರ್ಕಾರದ ವ್ಯವಸ್ಥೆ, ನಿರ್ಲಕ್ಷ್ಯ ಅಧಿಕಾರಿಗಳ ಕಾರ್ಯವೈಖರಿಗೆ ಬಲಿಯಾದದ್ದು ಅತೀವ ನೋವುಂಟು ಮಾಡಿದೆ. ಇದು ನಮಗೆಲ್ಲರಿಗೂ ದುಃಖ ತರುವ ವಿಚಾರ. ಇಂಥ ಗುಂಡಿಗಳನ್ನು ದುರಸ್ತಿ ಮಾಡಲು ಬಯಸದ ದಪ್ಪ ಚರ್ಮದ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು
ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವಿದ್ದ ಸಂದರ್ಭದಲ್ಲಿ ಜಿಲ್ಲೆಗೆ 50 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದ್ದರು. ಆದರೆ ಭ್ರಷ್ಟ ಬಿಜೆಪಿ ಪಕ್ಷದ ಆಪರೇಷನ್ ಕಮಲದಿಂದ ಬಂದ ಬಿಜೆಪಿ ಸರ್ಕಾರ ಜನಪರ ಕುಮಾರಣ್ಣನವರ ಸರ್ಕಾರ ಬೀಳಿಸಿದ ಮೇಲೆ 50 ಕೋಟಿ ರೂಪಾಯಿಗಳ ಅನುದಾನವನ್ನು ವಾಪಸ್ ಪಡೆಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ಸರ್ಕಾರ ಗುಂಡಿ ಮುಚ್ಚಿಸುವ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ, ನಾನೇ ಆ ಕಾರ್ಯವನ್ನು ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್, ಶಶಿಕುಮಾರ್, ಚಂದ್ರು ಉಪಸ್ಥಿತರಿದ್ದರು.