ಮಂಡ್ಯ ನಗರದ ರೈಲ್ವೆ ನಿಲ್ದಾಣದ ಮುಂಭಾಗ ಬೆಂಗಳೂರು-ಮೈಸೂರು ಹೆದ್ದಾರಿಯ ಬಾಟ(BATA) ಶೋರೂಮ್ ಬಳಿ ಕ್ಯಾಂಟರ್ ಬೈಕ್ ಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಂಡ್ಯ ನಗರದ ರಾಜ್ ಕುಮಾರ್ ಬಡಾವಣೆಯ ಆಂಟೋನಿಯವರ ಪುತ್ರ ಜಾರ್ಜ್ ವಿಜಯ್ ಕುಮಾರ್ ಪಿ.ಎ(54) ಎಂಬುವರೇ ಮೃತಪಟ್ಟವರು.
ಬಾಟ ಶೋರೂಂ ಬಳಿ ಇಂದು ರಾತ್ರಿ ಏಳು ಗಂಟೆ ಸುಮಾರಿಗೆ ಲಾರಿಯೊಂದು ಕ್ಯಾಂಟರ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಬೈಕ್ ನಲ್ಲಿದ್ದ ಜಾರ್ಜ್ ವಿಜಯ್ ಕುಮಾರ್ ಅವರಿಗೆ ಗುದ್ದಿದೆ. ಕ್ಯಾಂಟರ್ ಗುದ್ದಿದ ರಭಸಕ್ಕೆ ಜಾರ್ಜ್ ವಿಜಯ್ ಕುಮಾರ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ನಿನ್ನೆಯಷ್ಟೇ ಕಾರೆಮನೆ ಗೇಟ್ ಬಳಿ ರಸ್ತೆ ಗುಂಡಿಗೆ ನಿವೃತ್ತ ಯೋಧ ಕುಮಾರ್ ದುರ್ಮರಣಕ್ಕೀಡಾಗಿದ್ದರು. ಈ ಬೆನ್ನಲ್ಲೇ ಇಂದು ಈ ಅವಘಡ ನಡೆದಿರುವುದು ಆಘಾತ ಉಂಟು ಮಾಡಿದೆ.
ಮೃತ ವ್ಯಕ್ತಿಗೆ ಪತ್ನಿ ಅನಿತಾ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಮಧ್ಯಮ ವರ್ಗದ ಕುಟುಂಬದವರಾದ ಇವರು ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.