ಮಂಡ್ಯ ನಗರದ ವಿವಿಧೆಡೆ ಗುಂಡಿ ಬಿದ್ದ ರಸ್ತೆಗೆ ವೆಟ್ ಮಿಕ್ಸ್ ಹಾಕುವ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡರ ಗುಂಡಿ ಮುಚ್ಚುವ ಅಭಿಯಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಕಾರೆಮನೆ ಗೇಟ್ ಬಳಿ ವಿವಾದಿತ ರಸ್ತೆಗೆ ವೆಟ್ ಮಿಕ್ಸ್ ಹಾಕುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟರು.ಇದಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದರು.
ರಸ್ತೆ ಗುಂಡಿ ಮುಚ್ಚುವ ಮಹಾಲಿಂಗೇಗೌಡರ ಅಭಿಯಾನಕ್ಕೆ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಶ್ಲಾಘಿಸಿ ಮಾತನಾಡಿ, ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಅವರು ಮಾನವೀಯತೆ ಮೆರೆದು ಅಪಾಯಕಾರಿ ರಸ್ತೆಗುಂಡಿಗಳನ್ನು ವೈಯಕ್ತಿಕ ವೆಚ್ಚದಲ್ಲಿ ಮುಚ್ಚಿಸುವ ಮೂಲಕ ಜನ ಮೆಚ್ಚುವ ಕೆಲಸ ಮಾಡಿದ್ದಾರೆ.
ರಸ್ತೆ ಗುಂಡಿಗೆ ಬಿದ್ದು ನಿವೃತ್ತ ಯೋಧ ಸಾವನ್ನಪ್ಪಿದ ಘಟನೆ ಮನ ಕಲಕುವಂತದ್ದಾಗಿದೆ.ಮಾನವೀಯ ದೃಷ್ಟಿಯಿಂದ ಕಳೆದ ಎರಡು ದಿನಗಳಿಂದ ಮಹಾಲಿಂಗೇಗೌಡ ಅವರು ರಸ್ತೆಗುಂಡಿ ಮುಚ್ಚುವ ಅಭಿಯಾನ ಕೈಗೆತ್ತುಕೊಂಡಿದ್ದಾರೆ ಎಂದರು.
ನಮ್ಮ ಜೆಡಿಎಸ್ ಪಕ್ಷದ ವಕ್ತಾರ ರಚನಾತ್ಮಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಉತ್ತಮ ಸೇವಾ ಕಾರ್ಯವಾಗಿದೆ.ಇದು ಹೀಗೆ ಮುಂದುವರಿಯಲಿ, ಜನರ ಪ್ರೀತಿ-ಗೌರವಕ್ಕೆ ಪಾತ್ರರಾಗಲಿ ಎಂದು ಬೆನ್ನುತಟ್ಟಿದರು.
ಸ್ಥಳೀಯ ಹಣ್ಣಿನ ವ್ಯಾಪಾರಿಯೊಬ್ಬರು ಮಾತನಾಡಿ, ಜನ ಸೇವಕರಾಗಿರುವ ಮಹಾಲಿಂಗೇಗೌಡ ಅವರು, ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚಿಸುತ್ತಿದ್ದಾರೆ.ಸರ್ಕಾರ,ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಮಾಡಿರುವ ಮಹಾಲಿಂಗೇಗೌಡರಿಗೆ ಒಳ್ಳೆಯದಾಗಲಿ ಎಂದರು.
ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಅವರು ಮಾತನಾಡಿ, ರಸ್ತೆ ಗುಂಡಿಗೆ ಬಿದ್ದು ನಿವೃತ್ತ ಯೋಧ ಸಾವನ್ನಪ್ಪಿದರೂ ಬಿಜೆಪಿ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸಾಕಷ್ಟು ಬಾರಿ ಬಂದರೂ ರಸ್ತೆ ಗುಂಡಿಗಳು ಅವರ ಕಣ್ಣಿಗೆ ಕಾಣಲಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ವೈಯಕ್ತಿಕ ವೆಚ್ಚದಲ್ಲಿ ಗುಂಡಿಗಳನ್ನು ಮುಚ್ಚಿಸಲಾಗುತ್ತಿದೆ, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಇಂದು ಕಾರೇಮನೆ ಗೇಟ್, ಸಂಜಯ ವೃತ್ತ, ಎಸ್.ಡಿ.ಜಯರಾಂ ವೃತ್ತ, ಆಸ್ಪತ್ರೆ ರಸ್ತೆ, ಹೊಸಹಳ್ಳಿ, ಚೀರನಹಳ್ಳಿ ರಸ್ತೆ, ಮರಿಗೌಡ ಬಡಾವಣೆ ಮೂರನೇ ಕ್ರಾಸ್ ನಲ್ಲಿ ಗುಂಡಿಗಳನ್ನು ಮುಚ್ಚಿದ್ದೇವೆ. ಇನ್ನೂ ಹಲವು ಬಡಾವಣೆಗಳ ಜನರು ಗುಂಡಿಗಳನ್ನು ಮುಚ್ಚಲು ಆಹ್ವಾನಿಸುತ್ತಿದ್ದಾರೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿನ ಅಪಾಯಕಾರಿ ರಸ್ತೆಗುಂಡಿಗಳನ್ನು ಮುಚ್ಚಲಾಗುವುದು.ಈಗಾಗಲೇ ಸುಮಾರು 10-15ಲಕ್ಷ ರೂ. ವೆಚ್ಚವಾಗಿದೆ. ರೈತರು, ವ್ಯಾಪಾರಿಗಳು ಸಾರ್ವಜನಿಕರು ಹಾಗೂ ವಾಹನ ಸವಾರರ ಪ್ರಾಣ ರಕ್ಷಣೆಗಾಗಿ ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ, ಎಲ್ಲಾ ಗುಂಡಿಗಳನ್ನು ಮುಚ್ಚುವುದೇ ನಮ್ಮ ಧ್ಯೇಯವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಅನಿಲ್ ಗೌಡ, ವೆಂಕಟೇಶ್, ಶಶಿ, ಚಂದ್ರು ಮತ್ತಿತರರಿದ್ದರು.