ಮಂಡ್ಯ ನಗರದಲ್ಲಿ ಹದಗಟ್ಟಿರುವ ಗುಂಡಿ ಬಿದ್ದಿರುವ ರಸ್ತೆಗಳನ್ನು ಆದಷ್ಟು ಶೀಘ್ರವಾಗಿ ಸರಿಪಡಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ ಹಾಗೂ ದಿನೇಶ್ ಗೂಳಿಗೌಡ ಮಂಡ್ಯ ನಗರಸಭೆ ಅಧ್ಯಕ್ಷರಿಗೆ ಮನವಿ ಮಾಡಿದರು.
ಮಂಡ್ಯ ನಗರದಲ್ಲಿರುವ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು, ಸಾರ್ವಜನಿಕರಿಗೆ,ವಾಹನ ಸವಾರರಿಗೆ ಭಾರಿ ತೊಂದರೆ ಆಗಿರುವ ಹಿನ್ನೆಲೆಯಲ್ಲಿ ಇಂದು ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಅವರನ್ನು ಭೇಟಿ ಮಾಡಿದ ವಿಧಾನ ಪರಿಷತ್ ಸದಸ್ಯರಾದ ಮಧು ಜಿ. ಮಾದೇಗೌಡ ಹಾಗೂ ದಿನೇಶ್ ಗೂಳಿಗೌಡ ಮಾತುಕತೆ ನಡೆಸಿದರು.
ಮಂಡ್ಯ ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ.ಕೆಲ ದಿನಗಳ ಹಿಂದೆ ರಸ್ತೆ ಗುಂಡಿಗೆ ಬಿದ್ದು ನಿವೃತ್ತ ಯೋಧರೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ ಹಲವಾರು ಜನರು ಗಾಯಗೊಂಡಿರುವ ಬಗ್ಗೆ ಅಧ್ಯಕ್ಷ ಮಂಜು ಜೊತೆ ಚರ್ಚಿಸಿದರು.
ನಂತರ ಮಾತನಾಡಿದ ಮಧು ಜಿ.ಮಾದೇಗೌಡರು ಮಂಡ್ಯ ನಗರದ ರಸ್ತೆ ಗುಂಡಿಗಳು ಸೇರಿದಂತೆ ಈ ಖಾತೆ, ಆರ್ ಟಿ ಸಿ ಮತ್ತಿತರ ವಿಚಾರಗಳ ಬಗ್ಗೆ ಅಧ್ಯಕ್ಷರ ಬಳಿ ಚರ್ಚಿಸಿದ್ದೇವೆ.ಶೀಘ್ರವಾಗಿ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದ್ದೇವೆ.ಅದಕ್ಕೆ ಅಧ್ಯಕ್ಷ ಮಂಜು ಕೂಡ ಸ್ಪಂದಿಸಿ ಶೀಘ್ರವಾಗಿ ರಸ್ತೆ ಸರಿಪಡಿಸುವುದಾಗಿ ತಿಳಿಸಿದ್ದಾರೆ ಎಂದರು.
ಮಂಡ್ಯ ನಗರಸಭೆಯ ಅಧ್ಯಕ್ಷ ಎಚ್.ಎಸ್. ಮಂಜು ಮಾತನಾಡಿ, ಮಂಡ್ಯ ನಗರದ ಎಲ್ಲಾ ರಸ್ತೆಗಳಿಗೆ ಟಾರು ಹಾಕುವ ಕಾರ್ಯ ಡಿಸೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರು ರುದ್ರಪ್ಪ, ನಗರಸಭಾ ಸದಸ್ಯರಾದ ನಯೀಂ, ಶ್ರೀಧರ್ ಮತ್ತಿತರರಿದ್ದರು.