ಪ್ರತಾಪ್ ಸಿಂಹ ಒಬ್ಬ ಜನಪ್ರತಿನಿಧಿಯಾಗಿ ನಾಲಾಯಕ್, ಆತ ಇತ್ತಿಚೇಗೆ ನೀಡುತ್ತಿರುವ ಅಸಂಬದ್ದ ಹೇಳಿಕೆಗಳಿಂದ ಆತನ ಬಗ್ಗೆ ನನಗೆ ಕಿಂಚಿತ್ತು ಗೌರವವಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಹೆಚ್.ಎನ್.ರವೀಂದ್ರ ವಾಗ್ದಾಳಿ ನಡೆಸಿದರು.
ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಸಂಸದ ಪ್ರತಾಪ್ ಸಿಂಹ ಇಬ್ಬರು, ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ, ಇದು ಆಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತಿದೆ, ಒಂದು ಸಂತೋಷದ ವಿಚಾರವೆಂದರೆ ಆರೋಪ ಪ್ರತ್ಯಾರೋಪದಲ್ಲಿ ಒಬ್ಬರ ತಪ್ಪನ್ನು ಮತ್ತೊಬ್ಬರು ಎತ್ತಿ ತೋರಿಸುತ್ತಿದ್ದಾರೆ. ಇವರು ಏನು ಅಂತ ಜನತೆಗೆ ಗೊತ್ತಾಗಿದೆ ಎಂದು ಕಿಡಿಕಾರಿದರು.
ಪ್ರತಾಪ್ ಸಿಂಹ ಇಡೀ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ನಾನೇ ಮಾಡಿಸಿದ್ದೇನೆ ಎನ್ನುವಂತೆ ನಡೆದುಕೊಳ್ಳುತ್ತಿದ್ಧಾರೆ, ಹೆದ್ಧಾರಿಯಿಂದಾಗಿ ಜನರಿಗೆ ಎಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅವರಿಗೆ ಗೊತ್ತೇ ? ಅಕ್ಕಪಕ್ಕದ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಚಾರ ಪಡೆಯುತ್ತಿದ್ದಾರೆ. ಹೆದ್ದಾರಿ ಕಾಮಗಾರಿಯಲ್ಲಿ ಬೇರೆ ಜನಪ್ರತಿನಿಧಿಗಳ ಪಾತ್ರವಿಲ್ಲವೇ ಎಂದು ಪ್ರಶ್ನಿಸಿದರು.