ಮಂಡ್ಯ ಜಿಲ್ಲೆಯ ಬಸರಾಳು, ಹಿರೀಸಾವೆ ಹಾಗೂ ಅತ್ತಿಬೆಲೆ ವ್ಯಾಪ್ತಿಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಾಲ್ಕು ಬೈಕ್ ಗಳ ಜೊತೆಗೆ ಒಂದು ಮೊಬೈಲನ್ನು ಕದ್ದಿದ್ದ ಆರೋಪಿಯನ್ನು ಬಸರಾಳು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ 2 ಬಜಾಜ್ ಪಲ್ಸರ್ ಬೈಕ್ ಗಳು, ಒಂದು KTM ಡ್ಯೂಕ್ ಬೈಕ್, ಯಮಹಾ R15 V4 ಬೈಕ್ ಗಳು ಸೇರಿದಂತೆ 1 ಒಪ್ಪೋ ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಜು.11ರಂದು ಹೆಚ್.ಡಿ.ಕೋಟೆ ತಾಲ್ಲೂಕಿನ ವಡ್ಡರಪಾಳ್ಯ ಗ್ರಾಮದ ಅಭಿಷೇಕ್ ಎಂಬುವವರು ಬಸರಾಳು ಪೊಲೀಸ್ ಠಾಣೆಗೆ ಹಾಜರಾಗಿ ಜು.3, 2022 ರಂದು ನನ್ನ ಪಲ್ಸರ್ ಬೈಕನ್ನು ಒಬ್ಬ ವ್ಯಕ್ತಿಯು ಯಾಮಾರಿಸಿ ಕಳವು ಮಾಡಿರುವ ಬಗ್ಗೆ ದೂರು ನೀಡಿದ್ದರು.
ಅಭಿಷೇಕ್ ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ಗಾರೆ ಕೆಲಸಕ್ಕೆ ಹೋಗಲು ನನ್ನ ಬಜಾಜ್ ಪಲ್ಸರ್ ಬೈಕ್ನಲ್ಲಿ ಹೋಗುತ್ತಿದ್ದಾಗ ಮಂಡ್ಯ ನಗರದ ನಾಗಮಂಗಲ ರಸ್ತೆಯಲ್ಲಿ ನಿಂತಿದ್ದ ಒಬ್ಬ ವ್ಯಕ್ತಿಯನ್ನು ಕೊಪ್ಪಕ್ಕೆ ಹೇಗೆ ಹೋಗಬೇಕೆಂದು ದಾರಿ ಕೇಳಿದ್ದರು.
ಆಗ ಆ ವ್ಯಕ್ತಿ ನಾನು ಕೊಪ್ಪಕ್ಕೆ ಹೋಗಬೇಕು, ನಾನೇ ರಸ್ತೆ ತೋರಿಸುತ್ತೇನೆಂದು ಹೇಳಿ ಬೈಕ್ ಹತ್ತಿಕೊಂಡು, ಸ್ವಲ್ಪ ದೂರ ಬಂದ ನಂತರ, ನಿಮಗೆ ದಾರಿ ಗೊತ್ತಿರುವುದಿಲ್ಲ, ನಾನೇ ಬೈಕ್ ಓಡಿಸುತ್ತೇನೆ ಎಂದು ಹೇಳಿ, ಆತನೇ ಬೈಕ್ ಚಾಲನೆ ಮಾಡುತ್ತಿದ್ದ. ದಾರಿ ಮಧ್ಯೆ ಅಭಿಷೇಕ್ ಬಹಿರ್ದೆಸೆಗೆ ಹೋಗುವುದಕ್ಕಾಗಿ ಬಸರಾಳಿನ ಹನಗನಹಳ್ಳಿ ಬಳಿ ಬೈಕ್ ನಿಲ್ಲಿಸಲು ಹೇಳಿದಾಗ, ಬೈಕ್ ನಿಲ್ಲಿಸಿದ ಆತ ಬಹಿರ್ದಸೆ ಮುಗಿಸಿ ವಾಪಸ್ ಬರುವ ವೇಳೆಗೆ ಬೈಕನ್ನು ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬಸರಾಳು ಪೊಲೀಸ್ ಠಾಣೆಯ ಪಿ.ಎಸ್.ಐ ಮಲ್ಲಪ್ಪ ಅವರ ನೇತೃತ್ವ ತಂಡ, ಆರೋಪಿಯ ಸೆರೆಗೆ ಬಲೆ ಬೀಸಿತ್ತು.
ಆರೋಪಿಯು ಕದ್ದಿದ್ದ ಪಲ್ಸರ್ ಬೈಕನ್ನು ಹಾಸನ ಜಿಲ್ಲೆಯ ಹಿರಿಸಾವೆಯ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪ್ರಕರಣದ ಆರೋಪಿಯು ಕಳೆದ ನ.21ರಂದು ದೊಡ್ಡಗರುಡನಹಳ್ಳಿ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ಅನುಮಾನಾಸ್ಪದವಾಗಿ ಬರುತ್ತಿದ್ದ ವೇಳೆ, ಪೊಲೀಸರು ವಿಚಾರಿಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಹಲವು ಪ್ರಕರಣದಲ್ಲಿ ಭಾಗಯಾಗಿದ್ದ ಎಂದು ತಿಳಿದು ಬಂದಿದೆ. ಬಸರಾಳು ಪೊಲೀಸರು ಈ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.