ಕಬ್ಬು, ಭತ್ತ ಹಾಗೂ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ವೀರ ಕನ್ನಡಿಗರ ಘರ್ಜನೆ) ರಾಜ್ಯ ಘಟಕ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಹರ್ಡೀಕರ್ಭವನದ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಜಿಲ್ಲಾಧ್ಯಕ್ಷ ನವೀನ್ಕುಮಾರ್ ನೇತೃತ್ವದಲ್ಲಿ ರೈತಪರ ಘೋಷಣೆಗಳನ್ನು ಕೂಗಿದರು. ಸರ್ಕಾರ ಕೂಡಲೇ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ರೈತರು ಕಳೆದ ಇಪ್ಪತ್ತು ದಿನಗಳಿಂದ ಧರಣಿ ಸತ್ಯಾಗ್ರಹ ಮಾಡುತ್ತಿದ್ದರೂ ಸರ್ಕಾರ ಕೇಳಿಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಸರ್ಕಾರ ಶೀಘ್ರವಾಗಿ ಕಬ್ಬು, ಹಾಲು, ಭತ್ತಕ್ಕೆ ಸೂಕ್ತ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ ರಾಜ್ಯಾಧ್ಯಂತ ರೈತಪರ ಚಳುವಳಿಗೆ ಕರೆ ನೀಡಬೇಕಾಗುತ್ತದೆ ಎಂದು ಸರ್ಕಾರಗಳಿಗೆ ಎಚ್ಚರಿಸಿದರು.
ಮೆರವಣಿಗೆ ಮೂಲಕ ಸಾಗಿದ ಹೋರಾಟಗಾರರು, ರೈತ ಸಂಘ ನಡೆಸುತ್ತಿರುವ ಧರಣಿಗೆ ಬೆಂಬಲ ನೀಡಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಆರಾಧ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ, ಕರವೇ ಸಂಸ್ಥಾಪಕ ಮಂಜುನಾಥ್ ಕೆ, ರಾಜ್ಯಾಧ್ಯಕ್ಷ ಎನ್ ಗಣೇಶ್, ಗೌರವಾಧ್ಯಕ್ಷ ಅಬೂಬಕ್ಕರ್, ಜಿಲ್ಲಾ ಗೌರವಾಧ್ಯಕ್ಷ ರವಿ, ಪದಾಧಿಕಾರಿಗಳಾದ ರಾಜು, ಶ್ರೀನಿವಾಸ್ , ಮುನಿರಾಜು ಮತ್ತಿತರರಿದ್ದರು.