ರಕ್ತವನ್ನು ದಾನ ಪಡೆದವರಿಗೆ ಎಷ್ಟು ಅನುಕೂಲವಾಗುತ್ತದೆಯೋ, ಅಷ್ಟೇ ಅನುಕೂಲ ರಕ್ತ ನೀಡಿದವರಿಗೂ ಆಗುತ್ತದೆ. ರಕ್ತದಾನದಂತಹ ಮಹಾನ್ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಎನ್ಸಿಸಿ 14 ಕರ್ನಾಟಕ ಬೆಟಾಲಿಯನ್ ಮೈಸೂರಿನ ಸುಬೇದಾರ್ ಮೇಜರ್ ಗೋವಿಂದಪ್ಪ ತಿಳಿಸಿದರು.
ಎನ್ಸಿಸಿ ದಿನಾಚರಣೆ ಅಂಗವಾಗಿ ಮಂಡ್ಯ ವಿಶ್ವವಿದ್ಯಾಲಯದ ಕಲಾಭವನದಲ್ಲಿ ಮಂಡ್ಯ ವಿಶ್ವವಿದ್ಯಾಲಯ ಎನ್ಸಿಸಿ, ರೆಡ್ ಕ್ರಾಸ್ ಸಂಸ್ಥೆ, ಎಚ್ಡಿಎಫ್ ಸಿ ಬ್ಯಾಂಕ್,ಪಿಇಎಸ್ ಕಾಲೇಜ್ ಎನ್ಸಿಸಿ ಇವರ ವತಿಯಿಂದ ನಡೆದ ರಕ್ತದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಜೀವ ಉಳಿಸುವ ರಕ್ತದ ಅಗತ್ಯತೆ ಅಧಿಕವಾಗಿದೆ. ಅದಕ್ಕೆ ರಕ್ತದಾನ ಮಾಡುವ ಮೂಲಕ ಮಹಾನ್ ಕಾರ್ಯದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದು ಹೇಳಿದರು. ಎನ್ಸಿಸಿ ದಿನಾಚರಣೆ ಅಂಗವಾಗಿ ಭಾರತದಲ್ಲಿ ಎಲ್ಲ ಕಡೆ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.ಅದರಂತೆ ಮಂಡ್ಯ ವಿಶ್ವವಿದ್ಯಾಲಯ,ಪಿಇಎಸ್ ಕಾಲೇಜು, ಶಾಂತಿ ಕಾಲೇಜು, ಅನಿಕೇತನ ಕಾಲೇಜು ಸೇರಿದಂತೆ ಇತರೆ ಕಾಲೇಜಿನ ಹಳೆಯ ವಿಧ್ಯಾರ್ಥಿಗಳೆಲ್ಲರೂ ಸೇರಿ 250 ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಬೇರೆಯಲ್ಲಿಯೂ ದೊರೆಯದ ರಕ್ತವನ್ನು ದಾನದಿಂದಲೇ ಪಡೆಯಬೇಕಾಗಿದೆ. ಆರೋಗ್ಯದ ಸಂದರ್ಭದಲ್ಲಿ ಒಬ್ಬ ರೋಗಿಗೆ ರಕ್ತದ ಹನಿ ಸಿಕ್ಕಿದರೆ ಆತನ ಜೀವ ಉಳಿಯುತ್ತದೆ.ಆತ ತಮ್ಮನ್ನು ಸದಾ ಸ್ಮರಿಸುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಎನ್ಸಿಸಿ ಅಧಿಕಾರಿ ಸುರೇಶ್, ಎಚ್ ಡಿ ಎಫ್ ಸಿ ಬ್ಯಾಂಕ್ ಅಧಿಕಾರಿಗಳಾದ ನವೀನ್, ಶ್ರೀನಿಧಿ, ಮನು ಸೇರಿದಂತೆ ಇತರರು ಭಾಗವಹಿಸಿದ್ದರು.