-
ರೌಡಿಶೀಟರ್ ಅರುಣ್ ಅಲಿಯಾಸ್ ಕಪ್ಪೆ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಗಳು
- ಮಂಡ್ಯ ಬಸ್ ನಿಲ್ದಾಣದಲ್ಲಿ ನಾಲ್ವರು, ಮದ್ದೂರು ಬಸ್ ನಿಲ್ದಾಣದಲ್ಲಿ ಮೂವರ ಬಂಧನ
ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ದೊಡ್ಡ ಅರಸಿನಕೆರೆಯ ಅರುಣ್ ಅಲಿಯಾಸ್ ಕಪ್ಪೆ ಎಂಬ ರೌಡಿಯನ್ನು ಕೊಲೆ ಮಾಡಿದ್ದ ಏಳು ಮಂದಿ ಆರೋಪಿಗಳ ಹೆಡೆಮುರಿಯನ್ನು ಕೆ.ಎಂ.ದೊಡ್ಡಿ ಪೊಲೀಸರು ಕಟ್ಟಿದ್ದಾರೆ.
ರೌಡಿ ಶೀಟರ್ ಅರುಣ್ ಅಲಿಯಾಸ್ ಕಪ್ಪೆ ಹತ್ಯೆಯಲ್ಲಿ ಭಾಗಿಯಾಗಿದ್ದ ದೇವರಾಜ, ದೊಡ್ಡಯ್ಯ, ರಾಘವೇಂದ್ರ ಅಲಿಯಾಸ್ ರಾಘು, ಪುಟ್ಟಸ್ವಾಮಿ ಅಲಿಯಾಸ್ ಬೆಳ್ಳ, ಅಭಿ ಅಲಿಯಾಸ್ ಗಜ, ಚಂದು ಅಲಿಯಾಸ್ ಪಟಾಕಿ, ಅರವಿಂದ ಎಂಬ ಏಳು ಆರೋಪಿಗಳನ್ನು ಬಂಧಿಸಲಾಗಿದೆ.
ನಾಲ್ವರು ಆರೋಪಿಗಳಾದ ದೇವರಾಜ, ದೊಡ್ಡಯ್ಯ, ರಾಘವೇಂದ್ರ, ಪುಟ್ಟಸ್ವಾಮಿಯನ್ನು ಮಂಡ್ಯ ಬಸ್ ನಿಲ್ದಾಣದಲ್ಲಿ, ಇನ್ನುಳಿದ ಮೂರು ಆರೋಪಿಗಳಾದ ಅಭಿ, ಚಂದು, ಅರವಿಂದನನ್ನು ಮದ್ದೂರಿನ ಬಸ್ ನಿಲ್ದಾಣದಲ್ಲಿ ಕೆ.ಎಂ.ದೊಡ್ಡಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು
ಮದ್ದೂರು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಅರುಣ್ ಅಲಿಯಾಸ್ ಕಪ್ಪೆಗೂ ದೇವರಾಜು, ದೊಡ್ಡಯ್ಯ ಅವರ ಮಧ್ಯೆ ದೊಡ್ಡ ಅರಸಿನಕೆರೆ ಸೊಸೈಟಿ ಮುಂಭಾಗದಲ್ಲಿ ಜಗಳ ನಡೆದು ಉದ್ರಿಕ್ತರಾದ ಆರೋಪಿಗಳು ಅರುಣ್ ಮೇಲೆ ಹಲ್ಲೆ ಮಾಡಿದ್ದರು.
ಇದನ್ನೂ ಓದಿ:ರೌಡಿ ಅರುಣ್ @ಕಪ್ಪೆ ಕೊಲೆ ಹಿಂದಿನ ಅಸಲಿ ಕಾರಣವೇನು ?
ಈ ಸಂದರ್ಭ ಸ್ಥಳದಲ್ಲಿದ್ದ ಸ್ನೇಹಿತರು ಗಲಾಟೆ ಬಿಡಿಸಿ ದೇವರಹಳ್ಳಿ ಮಾರ್ಗವಾಗಿ ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಮತ್ತೆ ತಡೆದ ರೌಡಿಗಳಾದ ದೇವರಾಜು, ದೊಡ್ಡಯ್ಯ ಸಂಗಡಿಗರು ಅರುಣ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ದೊಡ್ಡಯ್ಯ, ದೇವರಾಜು ಗುಂಪಿನಿಂದ ತೀವ್ರವಾಗಿ ಹಲ್ಲೆಗೊಳಗಾದ ಅರುಣ್ಗೆ ಜಿ.ಮಾದೇಗೌಡ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅರುಣ್ ಮೃತಪಟ್ಟಿದ್ದ.
ಆರೋಪಿಗಳ ಪತ್ತೆಗೆ ಶಿವಮಲವಯ್ಯ ನೇತೃತ್ವದಲ್ಲಿ ರಚಿಸಿದ ತಂಡ ಆರೋಪಿಗಳನ್ನು ಬಂಧಿಸಿತ್ತು. ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಬನಾಸಿ, ಸಿಬ್ಬಂದಿಗಳಾದ ಪ್ರಭುಸ್ವಾಮಿ, ಮೋಹನ್, ಕರಿಗಾರ್, ಮಹೇಶ್, ರಾಜಶೇಖರ್, ಸುಬ್ರಮಣಿ ಇದ್ದರು.
ಕಾನ್ಸ್ಟೆಬಲ್ ಚೇತನ್ ಅಮಾನತು
ದೊಡ್ಡ ಅರಸಿನಕೆರೆ ಭಾಗಕ್ಕೆ ಬೀಟ್ ಮಾಡಲು ಕೆ.ಎಂ.ದೊಡ್ಡಿಯ ಕಾನ್ಸ್ಟೆಬಲ್ ಎನ್.ಆರ್.ಚೇತನ್ ಅವರನ್ನು ನೇಮಿಸಲಾಗಿತ್ತು. ನ.20ರಂದು ನಡೆದ ಕೊಲೆ ಸಂಬಂಧ ಮಾಹಿತಿ ಕಲೆ ಹಾಕದ ಚೇತನ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಅಮಾನತು ಮಾಡಿದ್ದಾರೆ.