ಅಂಗದಾನ ಶ್ರೇಷ್ಠವಾದದ್ದು ಮತ್ತು ಇದರ ಬಗ್ಗೆ ಅರೋಗ್ಯ ಕಾರ್ಯಕರ್ತರಲ್ಲಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಬಹಳ ಅಗತ್ಯ ಎಂದು ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಜಿ. ಶಿವರಾಮು ತಿಳಿಸಿದರು.
ಇಂದು ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ನ್ಯಾಯವೈದ್ಯಶಾಸ್ತ್ರ ವಿಭಾಗ, ವಿದ್ಯಾರ್ಥಿ ಬೆಂಬಲಿತ ಕೋಶ ಹಾಗೂ ಮೋಹನ್ ಫೌಂಡೇಶನ್ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂಗಗಳ ದಾನ ಮತ್ತು ಅಂಗಗಳ ಕಸಿ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಕಾರ್ಯಾಗಾರ ಮತ್ತು ಅತಿಥಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನದ ಬಗ್ಗೆ ಜನರಿಗೆ ನಿಧಾನವಾಗಿ ತಿಳಿಯುತ್ತಿದೆ.ಅಂಗಾಂಗ ದಾನದಿಂದ ಬೇರೆಯವರ ಜೀವ ಉಳಿಸಿ ಅವರ ಬಾಳಿಗೆ ಬೆಳಕಾಗಬಹುದು ಎಂದು ಹೇಳಿದರು.
ಅಂಗಾಂಗ ಕಸಿ ತಜ್ಞರಾದ ಡಾ. ಸುನಿಲ್ ಸೆನ್ವಿ ಅವರು, ಅಂಗಾಂಗ ಕಸಿ ಒಂದು ಸವಾಲು. ವ್ಯಕ್ತಿ ಮೃತಪಟ್ಟ ಮೇಲೆ ಪಿತ್ತಕೋಶ, ಮೂತ್ರಕೋಶ,ಯಕೃತ್ತು ಹಾಗೂ ಕಣ್ಣುಗಳನ್ನು ದಾನ ಮಾಡಿದರೆ ಈ ಅಂಗಾಂಗಗಳನ್ನು ಬೇರೆಯವರಿಗೆ ಜೋಡಿಸಿ ಅವರ ಆರೋಗ್ಯ ಉತ್ತಮ ಪಡಿಸಬಹುದು.ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಮೋಹನ ಫೌಂಡೇಶನ್ ನ ರಜನಿ ಅವರು ಮಾತನಾಡಿ, ಮೋಹನ್ ಫೌಂಡೇಶನ್ ಅಂಗಾಂಗ ಕಸಿಯ ಅಗತ್ಯ ಇರುವವರಿಗೆ ದಾನಿಗಳ ಪರಿಚಯ ಮಾಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕುಮಾರ್. ಡಾ. ವಿಜಯಕುಮಾರ್, ಡಾ. ಉತ್ತಮ್,ಡಾ.ಚಿನ್ಮಯ್, ನಾರಾಯಣಗೌಡ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ವೈದ್ಯಕೀಯ, ನರ್ಸಿಂಗ್ ವಿದ್ಯಾರ್ಥಿಗಳು, ಬೋಧಕ , ಬೋದಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.