ಸರ್ಕಾರ ಜಾರಿಗೆ ತಂದಿರುವ ಹೊಸ ಪಿಂಚಣಿ ಯೋಜನೆ(ಎನ್ಪಿಎಸ್) ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆ (ಓಪಿಎಸ್) ಮತ್ತೆ ಜಾರಿಗೆ ತರಲು ಆಗ್ರಹಿಸಿ ಡಿ. 19ರಂದು ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಚಲೋ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ಅಧ್ಯಕ್ಷ ನಿಂಗರಾಜು ತಿಳಿಸಿದರು.
ನಾಗಮಂಗಲದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 1-6- 2006 ರಿಂದ ಸರ್ಕಾರಿ ಸೇವೆಗೆ ಸೇರಿರುವ 2,75,000 ನೌಕರರು ಸರ್ಕಾರದ ಹೊಸ ಪಿಂಚಣಿ ಯೋಜನೆಗೆ ಸೇರುವುದರಿಂದ ಅವರಿಗೆ ನಿವೃತ್ತಿಯ ನಂತರ ಅನ್ಯಾಯವಾಗಿದೆ.ಅವರಿಗೆ ನಿವೃತ್ತಿಯ ನಂತರ 800, 1000,2000 ರೂ. ಪಿಂಚಣಿ ಪಡೆಯುತ್ತಿದ್ದಾರೆ.
ಸರ್ಕಾರಿ ನೌಕರರು ನಿವೃತ್ತನಾದ ಮೇಲೆ ಇಷ್ಟು ಕಡಿಮೆ ಪಿಂಚಣಿ ಹಣದಲ್ಲಿ ಜೀವನ ಸಾಗಿಸಲು ಸಾಧ್ಯವಿಲ್ಲ. ಒಂದು ಮಾತ್ರೆ ತೆಗೆದುಕೊಳ್ಳಲು ಸಾಧ್ಯವಾಗದ ಈ ಯೋಜನೆಯಿಂದ ನೌಕರರಿಗೆ ಅನ್ಯಾಯವಾಗಿದ್ದು, ಈ ಹಿಂದಿನ ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕೆಂದು ಒತ್ತಾಯಿಸಲು ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಮನುಕುಮಾರ್ ಮಾತನಾಡಿ, ಹೊಸ ಪಿಂಚಣಿ ಯೋಜನೆಯಡಿ ನೌಕರರು 10% ಪರ್ಸೆಂಟ್ ಹಣವನ್ನು ಹಾಗೂ ಸರ್ಕಾರ 14% ಹಣವನ್ನು ಸೇರಿಸಿ ಅದನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುತ್ತದೆ. ಇದೊಂದು ರೀತಿ ಜೂಜಾಟವಾಗಿದ್ದು,ಅದರಿಂದ ಬರುವ ಹಣದಲ್ಲಿ ನಿವೃತ್ತ ನೌಕರರಿಗೆ 800,1000 ಪಿಂಚಣಿ ನೀಡಲಾಗುತ್ತಿದೆ.
ಸರ್ಕಾರದ ನಿವೃತ್ತ ವೈದ್ಯರೊಬ್ವರು 4,300 ಪಿಂಚಣಿ ಪಡೆದಿದ್ದೆ ಅತಿ ಹೆಚ್ಚು. ನಿವೃತ್ತಿಯ ನಂತರ ಇಷ್ಟು ಕನಿಷ್ಟ ಹಣದಲ್ಲಿ ಜೀವನ ನಡೆಸಲು ಸಾಧ್ಯವೇ? ಸರ್ಕಾರದ ಸೇವೆಯನ್ನು ಹಗಲು-ರಾತ್ರಿ ಮಾಡಿದ ನೌಕರರಿಗೆ ಕೊನೆಗಾಲದಲ್ಲಿ ಈ ರೀತಿ ಅನಿಶ್ಚಿತತೆಗೆ ತಳ್ಳುವುದು ಸರಿಯೇ? ಸರ್ಕಾರ ಮತ್ತೆ ನಿಶ್ಚಿತ ಪಿಂಚಣಿ ಯೋಜನೆ ನೀಡಲೇಬೇಕು ಎಂದು ಒತ್ತಾಯಿಸಿದರು.
ಡಿ.19 ರಂದು ನಡೆಯುವ ಫ್ರೀಡಮ್ ಪಾರ್ಕ್ ಚಲೋ ಹೋರಾಟದ ಪೂರ್ವಭಾವಿ ಸಭೆ ಡಿ.3 ರಂದು ನಾಗಮಂಗಲ ತಾಲ್ಲೂಕು ಶಿಕ್ಷಕರ ಭವನದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು,ತಾಲೂಕಿನ ಎಲ್ಲಾ ಸರ್ಕಾರಿ ನೌಕರರು ಹಾಜರಾಗಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎನ್ಪಿಎಸ್ ನೌಕರರ ಸಂಘದ ಗೌರವ ಅಧ್ಯಕ್ಷರಾದ ಪ್ರೇಮ, ಖಜಾಂಚಿ ಸಂತೋಷ್, ಶ್ರೀನಿವಾಸ್ ಉಪಸ್ಥಿತರಿದ್ದರು.