ಮಂಡ್ಯನಗರದ ಲಕ್ಷ್ಮಿಜನಾರ್ಧನ ಬಾಲಕಿಯರ ಪ್ರೌಡಶಾಲೆ ಆವರಣದಲ್ಲಿ ಶ್ರೀ ಲಕ್ಷ್ಮಿಜನಾರ್ಧನ ಶಿಕ್ಷಣ ಸಂಸ್ಥೆಯಿಂದ ಬುಧವಾರ ಅಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಶ್ರೀ ಪುರಂದರದಾಸರ ದೇವರನಾಮ ಸ್ಪರ್ಧೆ ಹಾಗೂ ವಾಗ್ಗೇಯಕಾರರ ಪ್ರಬಂಧ ಸ್ಪರ್ಧೆಯನ್ನು ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಪುರಂದರ ದಾಸರು ಶ್ರೀ ಕೃಷ್ಣ ದೇವರಾಯನಿಗೆ ಸಾಲವನ್ನು ನೀಡುತ್ತಿದ್ದವರು. ಅವರು ಪೂರ್ವಾಶ್ರಮದಲ್ಲಿ ತುಂಬಾ ಜಿಪುಣರಾಗಿದ್ದರು. ಅಂಥವರು ಎಲ್ಲಾ ಸಕಲ ಐಶ್ವರ್ಯವನ್ನೂ ಬಿಟ್ಟು ದೇವರ ಸೇವೆಯಲ್ಲಿ ಜೀವನ ಕಳೆಯುತ್ತಾರೆ. ಅವರ ಜೀವಿತಾವಧಿಯಲ್ಲಿ ಒಟ್ಟು 4,75,000 ದೇವರ ಕೀರ್ತನೆಗಳನ್ನು ರಚಿಸಿದ್ದಾರೆ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಂಜನಾ ಶ್ರೀಕಾಂತ್ ಮಾತನಾಡಿ, ನಮ್ಮ ಸಂಸ್ಥೆಯಿಂದ ಈ ಕಾರ್ಯಕ್ರಮವನ್ನು ಸುಮಾರು 45 ವರ್ಷಗಳಿಂದ ಆಯೋಜಿಸುತ್ತಿದ್ದೇವೆ. ಈ ಸಂಸ್ಥೆಯನ್ನು ನಮ್ಮ ಹಿರಿಯರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ದೃಷ್ಟಿಯಿಂದ ಆರಂಭಿಸಿದ್ದಾರೆ. ನಾವೂ ಸಹ ಅವರ ಮಾರ್ಗದರ್ಶನದಂತೆ ಇಂದಿಗೂ ಈ ಸಂಸ್ಥೆಯನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದೇವೆ. ಮಕ್ಕಳು ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಮುಂದೆ ಉತ್ತಮ ಅವಕಾಶಗಳು ದೊರೆತಾಗ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯ್ರಮದಲ್ಲಿ ಟ್ರಸ್ಟ್ ನ ಸದಸ್ಯರಾದ ನಂದಿನಿ ಮುರುಳಿ, ತೀರ್ಪುಗಾರರಾದ ಎಸ್. ಎನ್.ರಮಾ, ಹೆಚ್. ಎಂ. ಲಕ್ಷ್ಮೀ, ಕೆ. ನಾಗರಾಜ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲತಾ, ಮುಖ್ಯಶಿಕ್ಷಕಿ ಧನಲಕ್ಷ್ಮಿ, ಡಾ. ಪದ್ಮ ಶ್ರೀನಿವಾಸ್, ರೇಖಾ, ವಸಂತ ಹಾಜರಿದ್ದರು.