ಹನುಮ ಜಯಂತಿಯ ದಿನದಂದೇ, ಆಂಜನೇಯ ಸ್ವಾಮಿಯ ಫ್ಲೆಕ್ಸ್ ಗಳನ್ನ ಅಧಿಕಾರಿಗಳು ತೆರವುಗೊಳಿಸಿರುವುದು ಖಂಡನೀಯ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.
ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದಲ್ಲಿ 30ಲಕ್ಷ ರೂ. ವೆಚ್ಚದ ರಸ್ತೆ ಹಾಗೂ 20ಲಕ್ಷ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹನುಮ ಜಯಂತಿ ಹಿಂದೂಗಳಿಗೆ ಪವಿತ್ರ ಹಬ್ಬ ವಾಗಿದ್ದು,ಈ ದಿನದಂದೇ ಹನುಮ ದೇವರ ಫ್ಲೆಕ್ಸ್ ಹಾಗೂ ಬೋರ್ಡ್ ಗಳನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿರುವುದಕ್ಕೆ ನನ್ನ ವಿರೋಧವಿದೆ ಎಂದರು.
ಈ ದೇಶದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಹಿಂದೂಗಳಿದ್ದಾರೆ. ಈಗ ಯಾರೆಲ್ಲ ನಾವು ಹಿಂದೂಗಳೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೋ, ಆ ವ್ಯಾಪ್ತಿಗೆ ನಾವು ಸಹ ಬರುತ್ತೇವೆ. ಹನುಮನ ಮಾಲೆ ಹಾಕಿಸಿಕೊಳ್ಳುವುದೇ ಹೆಮ್ಮೆಯ ವಿಚಾರ. ಆ ನಿಟ್ಟಿನಲ್ಲಿ ರಾಜ್ಯದಾದ್ಯಂತ ಆಚರಣೆ ಮಾಡುತ್ತಿರುವುದು ನಮಗೆಲ್ಲ ಸಂತಸ ಮೂಡಿಸಿದೆ. ಹನುಮ ಮಾಲೆ ಎಲ್ಲ ಹಿಂದೂಗಳಲ್ಲೂ ಹೊಸ ಉತ್ಸಾಹ ತರಿಸಿದೆ ಎಂದರು.
ಗೊಂದಲಗಳನ್ನು ಸೃಷ್ಠಿ ಮಾಡಲೇಬೇಕು ಎನ್ನುವ ಕೆಲ ಕಿಡಿಗೇಡಿಗಳು ಇದ್ದೇ ಇರುತ್ತಾರೆ. ಎಲ್ಲರೂ ಕಾನೂನಿಗೆ ಗೌರವ ಕೊಟ್ಟು, ಯಾವುದೇ ಧರ್ಮದವರಿಗೆ ಧಕ್ಕೆ ಬಾರದ ರೀತಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ನಂತರ ತಾಲೂಕಿನ ಹುಂಜನಕೆರೆ ಗ್ರಾಮದಲ್ಲಿ 10ಲಕ್ಷ ರೂ.ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ಪಟ್ಟಣ ಪುರಸಭಾ ವ್ಯಾಪ್ತಿಯ ಗಂಜಾಂನಲ್ಲಿ 2.5 ಲಕ್ಷ ರೂ. ವೆಚ್ಚದ ಸಿದ್ದಪ್ಪಾಜಿ ದೇವಸ್ಥಾನ ಹಾಗೂ 5 ಲಕ್ಷ ರೂ.ವೆಚ್ಚದ ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಮರೀಗೌಡ, ತಾ.ಪಂ. ಮಾಜಿ ಸದಸ್ಯ ದೇವೇಗೌಡ, ರೈಸ್ ಮಿಲ್ ದೇವೇಗೌಡ, ಅಶೋಕ, ಗ್ರಾ.ಪಂ ಸದಸ್ಯ ರಾಜೇಶ್, ದಿನೇಶ್, ಮುಖಂಡರಾದ ರಘು ಸೇರಿದಂತೆ ಇತರರಿದ್ದರು.