ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಮಂಗಳವಾರ ಮಂಡ್ಯದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಇಂಡವಾಳು ಅವರು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಚೈತನ್ಯ ಸ್ವರೂಪರಾಗಿದ್ದಾರೆ. ಅಪಾರ ಜ್ಞಾನ ಸಂಪತ್ತು ಹೊಂದಿದ್ದ ಅಂಬೇಡ್ಕರ್ ಅವರು ವಿಶ್ವಜ್ಞಾನಿ ಮತ್ತು ವಿಶ್ವರತ್ನ ಆಗಿದ್ದಾರೆ. ಇಂತಹ ಮಹನೀಯ ವ್ಯಕ್ತಿ ಈ ದೇಶದ ನೆಲದಲ್ಲಿ ಹುಟ್ಟಿದ್ದೇ ನಮ್ಮೆಲ್ಲರ ಪುಣ್ಯ ಎಂದು ಸಚ್ಚಿದಾನಂದ ಹೇಳಿದರು.
ತಳ ಸಮುದಾಯದ ಜನರ ಧ್ವನಿಯಾಗಿದ್ದ ಅಂಬೇಡ್ಕರ್ ಅವರು ಹಿಂದುಳಿದ ಮತ್ತು ಶೋಷಿತ ವರ್ಗದ ಜನರಿಗೆ ಸಂವಿಧಾನದಲ್ಲಿ ಮೀಸಲು ಸೌಲಭ್ಯ ಕಲ್ಪಿಸುವ ಮೂಲಕ ಈ ಸಮುದಾಯಗಳ ಉನ್ನತಿಗೆ ಕಾರಣರಾಗಿದ್ದಾರೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಬೇವಿನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬೇವಿನಹಳ್ಳಿ ಮಹೇಶ್, ಬಿಜೆಪಿ ಮಂಡ್ಯ ನಗರ ಘಟಕದ ಅಧ್ಯಕ್ಷ ಟಿ. ವಿವೇಕ್, ಮಾಜಿ ಅಧ್ಯಕ್ಷ ಎಚ್.ಆರ್.ಅರವಿಂದ್, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ನಿತ್ಯಾನಂದ, ಮುಖಂಡರಾದ ತಡಗವಾಡಿ ಪಾಪು, ಕಬ್ಬನಹಳ್ಳಿ ರಾಮಚಂದ್ರ, ಲೋಕಸರ ಶಂಕರ್, ಕುಮಾರಸ್ವಾಮಿ, ವೇಣು, ಸರ್ವೇಶ್ ಇತರರು ಭಾಗವಹಿಸಿದ್ದರು.