ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ಶಾರ್ಟ್ ಕೋರ್ಸ್ ಈಜು ಸ್ಪರ್ಧೆಯನ್ನು ಮಂಡ್ಯದಲ್ಲಿ ಆಯೋಜನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಈಜು ಸಂಸ್ಥೆಯ ಕಾರ್ಯದರ್ಶಿ ಎಂ.ಸತೀಶ್ ಕುಮಾರ್ ತಿಳಿಸಿದರು.
ಮಂಡ್ಯ ನಗರದ ಪಿಇಟಿ ಈಜು ಕೇಂದ್ರದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ಮಂಡ್ಯ ಹಾಗೂ ಕರ್ನಾಟಕ ರಾಜ್ಯ ಈಜು ಸಂಸ್ಥೆಯಿಂದ ಮಂಗಳವಾರ ಆಯೋಜಿಸಿದ್ದ 21ನೇ ರಾಜ್ಯ ಮಟ್ಟದ ಶಾರ್ಟ್ ಕೋರ್ಸ್ ಈಜು ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಂಡ್ಯದ ಪಿಇಟಿ ಈಜು ಕೇಂದ್ರದಲ್ಲಿ ಇರುವ ಸೌಲಭ್ಯಗಳು ಭಾರತದಲ್ಲಿಯೇ ಸಿಗುವ ಅತ್ಯುತ್ತಮ ಸೌಲಭ್ಯಗಳಲ್ಲಿ ಒಂದಾಗಿದ್ದು, ಕರ್ನಾಟಕದಲ್ಲಿ ಈ ರೀತಿಯ ಈಜು ಕೇಂದ್ರ ಮತ್ತೊಂದಿಲ್ಲ. ಈ ಕಾರಣಕ್ಕಾಗಿಯೇ 21 ರಾಜ್ಯ ಮಟ್ಟದ ಈಜು ಸ್ಪರ್ಧೆಗಳಲ್ಲಿ 11 ಭಾರಿ ಪಿಇಟಿ ಈಜು ಕೇಂದ್ರದಲ್ಲಿ ರಾಜ್ಯ ಮಟ್ಟದ ಈಜು ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಇಲ್ಲಿ ಭಾಗವಹಿಸಲು ಬಂದಿರುವ ಬಹುತೇಕ ವಿದ್ಯಾರ್ಥಿಗಳು ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಲು ಪ್ರಯುತ್ನ ಪಡುತ್ತಿದ್ದಾರೆ. ಅವರ ಆಶಯ ಆದಷ್ಟು ಬೇಗ ನೆರವೇರಲಿ. ಇಂತಹ ಪ್ರತಿಭೆಗಳಿಂದಲೇ ಕರ್ನಾಟಕ ರಾಜ್ಯ ಈಜು ಸಂಸ್ಥೆಯು ಸತತವಾಗಿ 31 ಬಾರಿ ದೇಶದಲ್ಲಿ ಪ್ರಥಮ ಸ್ಥಾನವನ್ನು ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಮಾತನಾಡಿ, 21ನೇ ರಾಜ್ಯ ಮಟ್ಟದ ಶಾರ್ಟ್ ಕೋರ್ಸ್ ಈಜು ಸ್ಪರ್ಧೆಯಲ್ಲಿ ಕರ್ನಾಟಕದಾದ್ಯಂತ ಒಟ್ಟು 550 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. 21 ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 11 ಭಾರಿ ಮಂಡ್ಯದ ಪಿಇಟಿ ಸಂಸ್ಥೆ ಸ್ಪರ್ಧೆಯನ್ನು ಆಯೋಜನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ನಿರ್ದೇಶಕ ಡಾ.ರಾಮಲಿಂಗಯ್ಯ, ಈಜು ಕೇಂದ್ರದ ಆಡಳಿತಾಧಿಕಾರಿ ಡಾ.ಚಂದ್ರಶೇಖರ್ ಹಾಜರಿದ್ದರು.