ಡಾ.ಬಿ.ಆರ್.ಅಂಬೇಡ್ಕರ್ ಅವರ ವಿದ್ವತ್ತು ಜಗತ್ತಿಗೆ ಜ್ಞಾನದ ಬೆಳಕಾಗಿದೆ ಎಂದು ಜಿಲ್ಲಾ ಗಾಯಕರ ಟ್ರಸ್ಟ್ ಅಧ್ಯಕ್ಷ ಡಾ.ಮಾದೇಶ್ ಹೇಳಿದರು.
ಮಂಡ್ಯ ನಗರದ ಸಿದ್ದಾರ್ಥ ಬಡಾವಣೆಯಲ್ಲಿರುವ ಸ್ನೇಹಾಲಯ ಕೇಂದ್ರದಲ್ಲಿ ಜಿಲ್ಲಾ ಗಾಯಕರ ಟ್ರಸ್ಟ್ ಆಯೋಜಿಸಿದ್ದ ಬೋಧಿ ಸತ್ವ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ವರ್ಷದ ಪರಿನಿಬ್ಬಾಣ ದಿನ ಪ್ರಯುಕ್ತ ವಿಶೇಷ ಮಕ್ಕಳಿ(ಎಚ್ಐವಿ ಸೋಂಕಿತ)ಗೆ ಪೌಷ್ಠಿಕಾಹಾರ ಮತ್ತು ನೋಟ್ಬುಕ್-ಪರಿಕರ ವಿತರಣೆ ಹಾಗೂ ಗಾಯನ ಕಾರ್ಯಕ್ರಮಕ್ಕೆ ಟ್ರಸ್ಟ್ ಅಧ್ಯಕ್ಷ ಡಾ.ಮಾದೇಶ್ ಚಾಲನೆ ನೀಡಿದರು.
ಜಗತ್ತಿನಲ್ಲಿ ಪ್ರತಿ ಕ್ಷಣ, ಪ್ರತಿನಿತ್ಯ ಗೌರವಕ್ಕೆ ಪಾತ್ರರಾಗುವ ಏಕೈಕ ವ್ಯೆಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಆಗಿದ್ದಾರೆ, ಪ್ರತಿನಿತ್ಯ ಒಂದಲ್ಲ ಒಂದು ದೇಶ, ಜನತೆ ಅವರ ಹೆಸರಿನಲ್ಲಿ ಸೇವಾ ಕಾರ್ಯ ರೂಪಿಸಿರುತ್ತವೆ ಇಲ್ಲಾ ವಿಚಾರಸಂಕಿರಣ, ಸ್ಮರಣೆ, ಅಧ್ಯಯನ ನಡೆಸುತ್ತಿರುತ್ತವೆ ಎಂದು ನುಡಿದರು.
ವಿಶ್ವದ ಎಲ್ಲಾ ರಾಷ್ಟ್ರಗಳ ಕಾನೂನು ಗ್ರಂಥ ಓದಿದ ಏಕೈಕ ವ್ಯಕ್ತಿಯಾಗಿದ್ದಾರೆ, ಇಂತಹ ಅಪರೂಪದ ದೈತ್ಯ ಜ್ಞಾನದ ಬೆಳಕು ವಿಶ್ವಕ್ಕೆ ಮಾದರಿಯಾಗಿದೆ, ಭಾರತೀಯರು ಮಾತ್ರ ಜಾತಿ ಹುಡುಕುತ್ತಾರೆ, ಜ್ಞಾನ, ವೈಜ್ಞಾನಿಕ ಚಿಂತನೆಗಳು ಕಾಣುವುದಿಲ್ಲ ಎಂದು ತಿಳಿಸಿದರು.
ಮುಂದಿನ ಪೀಳಿಗೆಯಾದರೂ ಅಂಬೇಡ್ಕರ್ ಅವರ ಚಿಂತನೆ-ಬರಹ, ಗ್ರಂಥಗಳನ್ನು ವೈಜ್ಞಾನಿಕ ದೃಷ್ಠಿಕೋನದಲ್ಲಿ ನೋಡಿ, ಅವುಗಳನ್ನು ಅಭಿವೃದ್ದಿಗೆ, ದೇಶದ ಪ್ರಗತಿಗೆ, ಜನಸಾಮನ್ಯರ ಸಮಸ್ಯೆಗಳ ಪರಿಹಾರಕ್ಕೆ ಬಳಸಿಕೊಳ್ಳುವಂತಾಗಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಶೇಷಮಕ್ಕಳಿ (ಎಚ್ಐವಿ ಸೋಂಕಿತ)ಗೆ ಪೌಷ್ಠಿಕಾಹಾರ ಮತ್ತು ನೋಟ್ಬುಕ್-ಪರಿಕರ ವಿತರಣೆ ಕಾರ್ಯ ಗಣ್ಯರ ಸಮ್ಮುಖದಲ್ಲಿ ನಡೆಯಿತು. ಗಾಯಕರಾದ ಡಾ.ಮಾದೇಶ್, ಹನಿಯಂಬಾಡಿ ಶೇಖರ್, ವೈರಮುಡಿ, ಉಮೇಶ್ ತಂಡದವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಎಂ.ಓ.ಬಿ ಗ್ರಾಮೀಣ ಆರೋಗ್ಯ ಕೇಂದ್ರದ ಸಿಸ್ಟರ್ ಜೋಳಿ ಡೋಟೋಡ್ಸ್, ಸ್ನೇಹಾಲಯ ಕೇಂದ್ರದ ಸಿಸ್ಟರ್ ಜೋಸ್ಸಿ, ಯೋಗಗುರು ಕೆ.ಚಂದ್ರ ಮತ್ತಿತರರಿದ್ದರು.