ಕಳೆದ 2006 ಏ.1ರ ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಸಂಧ್ಯಾಕಾಲದ ಬದುಕಿಗೆ ಮಾರಕವಾದ ಷೇರುಪೇಟೆ ಆಧಾರಿತ, ಅವೈಜ್ಞಾನಿಕ N.PS ಯೋಜನೆ ರದ್ದುಪಡಿಸಿ, ನಿಶ್ಚಿತವಾದ ಹಳೆಯ ಪಿಂಚಣಿ ಜಾರಿಗೆ ತರಲು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ N.P.S ನೌಕರರ ಸಂಘವು ಮಂಡ್ಯನಗರದಲ್ಲಿ ಡಿ.11ರಂದು Vote for O.P.S ಪಾದಯಾತ್ರೆ ಅಭಿಯಾನ ಹಮ್ಮಿಕೊಂಡಿದೆ ಎಂದು ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಸಿದ್ದರಾಜು ಬಿ.ಬಿ. ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಸಂಘ ವತಿಯಿಂದ ಡಿಸೆಂಬರ್ 19ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ”ಮಾಡು ಇಲ್ಲವೇ ಮಡಿ” ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದ ಅಂತಿಮ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ Vote for O.P.S ಎಂಬ ಪಾದಯಾತ್ರೆ ಅಭಿಯಾನ ಆಯೋಜಿಸಲಾಗುತ್ತಿದೆ ಎಂದರು.
ಅಂದು ಅಭಿಯಾನವು ಮಂಡ್ಯದ ರೈತ ಸಭಾಂಗಣದಿಂದ ಹೊರಟು ಸಂಜಯ ವೃತ್ತದಿಂದ ಆರ್.ಪಿ. ರಸ್ತೆ ಕ್ರಮಿಸಿ, ಗಾಂಧಿಭವನ ಬಳಿಯ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ವಿ.ವಿ. ರಸ್ತೆ ಮೂಲಕ ಸಂಚರಿಸಿ, ಮಹಾವೀರ ವೃತ್ತದ ಮೂಲಕ ಸಂಜಯ ವೃತ್ತ ತಲುಪಿ, ಅಲ್ಲಿಂದ ಮತ್ತೆ ರೈತ ಸಭಾಂಗಣಕ್ಕೆ ತಲುಪುವುದು. ನಂತರ ಬೆಳಿಗ್ಗೆ 11 ಗಂಟೆಗೆ ರೈತ ಸಭಾಂಗಣದಲ್ಲಿ ಜಿಲ್ಲಾ ಸಮಾವೇಶ ನಡೆಯಲಿದೆ ಎಂದರು.
ಈ ಕಾರ್ಯಕ್ರಮವನ್ನು ಶಾಸಕಎಂ.ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸುವುವ ಮೂಲಕ ಉದ್ಘಾಟಿಸಲಾಗುವುದು, ಈ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಮಧು.ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ಎನ್.ಪಿ.ಎಸ್. ರಾಜ್ಯಧ್ಯಕ್ಷ ಶಾಂತರಾಮ್, ಪ್ರಧಾನ ಕಾರ್ಯದರ್ಶಿ ನಾಗನಗೌಡ, ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರ್, ರಾಜ್ಯ ಉಪಾಧ್ಯಕ್ಷ ಕೆ.ಜೆ.ಮಂಜುನಾಥ್ರವರು, ರಾಜ್ಯ ಸಂಚಾಲಕ ಎ.ಎಚ್.ನಿಂಗೇಗೌಡ ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಎಂ.ವಿ.ಪುರುಷೋತ್ತಮ್, ಎಂ.ಎಲ್.ಕೃಷ್ಣೇಗೌಡ, ರಘು, ಸಿದ್ದರಾಜು ಜಿ.ಎಸ್ ಹಾಗೂ ಕೆಂಚರಂಗಯ್ಯ ಉಪಸ್ಥಿತರಿದ್ದರು.