ಕಾಂಗ್ರೆಸ್ ಜಿಲ್ಲಾಧ್ಯಕ್ಷರೇ, ನಿಮ್ಮ ಪಕ್ಷವನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬೇರೆಯವರಿಗೆ ಅಡವಿಡಬೇಡಿ,ಮೊದಲು ನಿಮ್ಮ ಪಕ್ಷವನ್ನು ಸಂಘಟನೆ ಮಾಡಿ ಅಭ್ಯರ್ಥಿಯನ್ನು ನಿಲ್ಲಿಸಿ ಎಂಎಲ್ಎ ಮಾಡಿ, ಆಯ್ತು ನಾನು ಕಪಟ ನಾಟಕಕಾರಾನೇ… ಅದಕ್ಕೆ ಕ್ಷೇತ್ರದ ಜನರು ನನ್ನನ್ನು ಮೂರು ಬಾರಿ ಎಂಎಲ್ಎ ಮಾಡಿ, ಮೂರು ಬಾರಿ ಜಿಲ್ಲಾ ಪಂಚಾಯತ್ ಸದಸ್ಯ ಮಾಡಿ, ಎಂಪಿ ಮಾಡಿ ಮಂತ್ರಿ ಮಾಡಿದ್ದಾರೆ ಎಂದು ಶಾಸಕ ಸಿ.ಎಸ್. ಪುಟ್ಟರಾಜು ತಿರುಗೇಟು ನೀಡಿದರು.
ಪಾಂಡವಪುರ ಪಟ್ಟಣದ ಅರಳಕುಪ್ಪೆ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕಟ್ಟಡ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ರವರಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ಅವರು, ನನ್ನ ಮೇಲೆ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಟೆಂಡರ್ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಿ ನಾನೇ ಕೆಲಸ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಈಗ 25 ರಿಂದ 30 ಕೋಟಿ ಕಾಮಗಾರಿಗಳ ಟೆಂಡರ್ ನಡೆಯಲಿದೆ. ನೀವು ಟೆಂಡರ್ ನಲ್ಲಿ ಭಾಗವಹಿಸಿ, ನಾನೇ ಟೆಂಡರ್ ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತೇನೆ. ನಿಮಗೆ ಯಾವ ಅನುದಾನ ಬೇಕು, ಅದರಲ್ಲಿ ಟೆಂಡರ್ ಹಾಕಿ, ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಿ ಕೊಡಲಿ ಎಂದು ಸವಾಲು ಹಾಕಿದರು.
ಈ ಪ್ರೊಕ್ಯೂರ್ ಮೆಂಟ್ ಟೆಂಡರ್ ಮಾಡಿಸಿ ಸಾಕಷ್ಟು ನಿಬಂಧನೆಗಳನ್ನು ಹಾಕಿ, ಅವರೇ ಕೆಲಸವನ್ನು ಹಿಡಿಯುತ್ತಾರೆ ಎನ್ನುವ ಆಪಾದನೆ ಸುಳ್ಳು. ಯಾರು ಕಣ್ಣು ಮುಚ್ಚಿ ಆಟವಾಡಲು ಆಗಲ್ಲ.ಕಾನೂನು ಚೌಕಟ್ಟು ಮೀರಿ ಏನೂ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಗುತ್ತಿಗೆದಾರರಾಗಿ ಸಾಕಷ್ಟು ಅನುಭವ ಇರುವ,ಈ ಜಿಲ್ಲೆಯ ಮಂತ್ರಿಯಾಗಿ ಕೆಲಸ ಮಾಡಿರುವ ಚಲುವರಾಯಸ್ವಾಮಿಯವರನ್ನು ಕೇಳಿ ಗಂಗಾಧರ್ ಅವರು ತಿಳಿದುಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ದಬ್ಬಾಳಿಕೆ ಮಾಡುತ್ತೀರೆಂಬ ಗಂಗಾಧರ್ ಆಪಾದನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,ದಬ್ಬಾಳಿಕೆ ಅಂದರೆ ಏನು? ದಬ್ಬಾಳಿಕೆ ಮಾಡಿದ್ದಕ್ಕೆ ಪುನೀತೋತ್ಸವಕ್ಕೆ ಸಾಕು ಎಂದು ಜನರಿಗೆ ಕೈ ಮುಗಿದರೂ ಅಷ್ಟು ಜನ ಬಂದಿದ್ದು ಎಂದರು.