ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಅವರಿಗೆ ವಿಶೇಷ ತರಗತಿ ನೀಡುವ ಮೂಲಕ ಮುಖ್ಯವಾಹಿನಿಗೆ ತರಬೇಕೆಂದು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಮತಾ ಶೆಟ್ಟಿ ಸಲಹೆ ನೀಡಿದರು.
ಮಂಡ್ಯ ತಾಲೂಕಿನ ಕೊತ್ತತ್ತಿಯ ಶ್ರೀವಿದ್ಯಾ ಗಣಪತಿ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ, ಹತ್ತನೇ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ 45 ಮಕ್ಕಳಿಗೆ ಮೂರು ತಿಂಗಳ ಅವಧಿಯ ಟ್ಯೂಷನ್ ತರಗತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಆರ್ಥಿಕ ವ್ಯವಹಾರಗಳನ್ನು ಮಾಡುವುದಲ್ಲದೆ, ಸಮುದಾಯಕ್ಕೆ ಪೂರಕವಾದ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಅದರಂತೆ ಇಂದು ಸರ್ಕಾರಿ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ,ಆ ಮಕ್ಕಳಿಗೆ ವಿಶೇಷ ತರಗತಿಗಳನ್ನು ನೀಡಿ, ಅವರನ್ನು ಸಹ ಮುಖ್ಯ ವಾಹಿನಿಗೆ ತರುವ ವ್ಯವಸ್ಥೆಯನ್ನು ಡಾ. ಡಿ ವೀರೇಂದ್ರ ಹೆಗ್ಗಡೆಯವರು ಕಲ್ಪಿಸಿದ್ದಾರೆ.ಇದನ್ನು ವಿದ್ಯಾರ್ಥಿಗಳು ಬಳಸಿಕೊಂಡು ಮಾದರಿ ವಿದ್ಯಾರ್ಥಿಗಳಾಗುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಿವನಂಜಯ್ಯ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕುಂಠಿತ ಗೊಳ್ಳುತ್ತಿದ್ದು, ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಿ ಅಭ್ಯಾಸ ಮಾಡುವ ಮೂಲಕ ಶಾಲೆಗೆ ಪೋಷಕರಿಗೆ ಕೀರ್ತಿ ತರಬೇಕೆಂದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ವೇತ, ಮುಖ್ಯ ಶಿಕ್ಷಕ ರಾಜು ಎಂ.ಸಿ, ತರಬೇತಿ ಶಿಕ್ಷಕಿ ಯೋಗಿತಾ ಹಾಗೂ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮಹೇಶ್, ಸಹ ಶಿಕ್ಷಕ ರುದ್ರೇಶ್, ವಲಯದ ಮೇಲ್ವಿಚಾರಕ ಸುನಿಲ್, ಸೇವಾ ಪ್ರತಿನಿಧಿ ನಂದಿನಿ ಉಪಸ್ಥಿತರಿದ್ದರು.