ಚಿತ್ರದ ನಾಯಕಿ ಉಮಾ ವೈ.ಜಿ ಕಂಠಸಿರಿಯಲ್ಲಿ ಮೂಡಿಬಂದಿರುವ ‘ಒಂದೊಂದೇ ಕಿಡಿ..’ ಹಾಡು ಮುಂಬರುವ ದಿನಗಳಲ್ಲಿ ದಲಿತ ಹೋರಾಟಕ್ಕೆ ಕ್ರಾಂತಿಗೀತೆ ಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ದೌರ್ಜನ್ಯ ಮತ್ತು ಶೋಷಣೆಯ ವಿರುದ್ಧ ದಲಿತರು ಸಿಡಿದೇಳಬೇಕೆಂದು ಸಾರಿ ಹೇಳುವ ಈ ಹಾಡಿಗೆ, ವರದಾರ್ ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದಾರೆ. ಸುಬ್ರಮಣ್ಯ ಆಚಾರ್ಯ ಅವರ ಸಂಗೀತ ಸಂಯೋಜನೆ ಕೂಡ ಅದ್ಭುತವಾಗಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಪಾಲಾರ್ ಚಿತ್ರದ ಟ್ರೈಲರ್ ಕೂಡ ಸಿನಿ ರಸಿಕರ ಗಮನ ಸೆಳೆದಿತ್ತು. ದಲಿತರ ಮೇಲಿನ ಶೋಷಣೆ, ಮರ್ಯಾದೆಗೇಡು ಹತ್ಯೆ, ಭೂ ಕಬಳಿಕೆ ಹೀಗೆ ಹಲವು ವಿಚಾರಗಳ ಬಗ್ಗೆ ನಿರ್ದೇಶಕರು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಪಾ ರಂಜಿತ್, ಕನ್ನಡದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ, ನಟ ಸತೀಶ್ ನಿನಾಸಂ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಪಾಲಾರ್ ಚಿತ್ರದ ಟ್ರೈಲರ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಯುವ ನಿರ್ದೇಶಕ ಜೀವ ನವೀನ್ ಆಕ್ಷನ್ ಕಟ್ ಹೇಳಿರುವ ‘ಪಾಲಾರ್’ ಚಿತ್ರದಲ್ಲಿ ಉಮಾ ವೈ ಜಿ ಮತ್ತು ತಿಲಕ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವೀನ್ ಕುಮಾರ್ ಬಿ, ಕೆ ಆರ್ ಸೌಜನ್ಯ, ಸೌಂದರ್ಯ ಕೆ ಆರ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.