ಕಳೆದ 2006 ಏ.1ರ ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಸಂಧ್ಯಾಕಾಲದ ಬದುಕಿಗೆ ಮಾರಕವಾದ ಷೇರುಪೇಟೆ ಆಧಾರಿತ, ಅವೈಜ್ಞಾನಿಕ N.P.S ಯೋಜನೆ ರದ್ದುಪಡಿಸಿ, ನಿಶ್ಚಿತವಾದ ಹಳೆಯ ಪಿಂಚಣಿ ಜಾರಿಗೆ ತಂದವರಿಗೆ ಮತ ಹಾಕುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ N.P.S ನೌಕರರ ಸಂಘವು ಮಂಡ್ಯನಗರದಲ್ಲಿ ಭಾನುವಾರ ”Vote for O.P.S” ಪಾದಯಾತ್ರೆ ಅಭಿಯಾನ ನಡೆಸಿತು.
ಭಾನುವಾರ ಬೆಳಿಗ್ಗೆ ಮಂಡ್ಯನಗರದ ರೈತಸಭಾಂಗಣದಿಂದ ಅಭಿಯಾನ ಪ್ರಾರಂಭಿಸಿದ ನೂರಾರು ಸರ್ಕಾರಿ ನೌಕರರು N.P.S ರದ್ದುಗೊಳಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ನಗರದ ಆರ್.ಪಿ.ರಸ್ತೆ ಮೂಲಕ ಗಾಂಧಿಭವನ ಮಾರ್ಗವಾಗಿ ಸಾಗಿ ವಿ.ವಿ.ರಸ್ತೆ, ಮಹವೀರ ವೃತದ ಮೂಲಕ ಆಗಮಿಸಿ ಮತ್ತೇ ರೈತಸಭಾಂಗಣವನ್ನು ತಲುಪಿ ರಾಷ್ಟ್ರಕವಿ ಕುವೆಂಪು ಅವರ ಪುತ್ಥಳಿಗೆ ಮಾರ್ಲಾಪಣೆ ಮಾಡಿದರು.
ರಾಜ್ಯದ ಸಂಘ ವತಿಯಿಂದ ಡಿಸೆಂಬರ್ 19ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ”ಮಾಡು ಇಲ್ಲವೇ ಮಡಿ” ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದ ಅಂತಿಮ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ Vote for O.P.S ಎಂಬ ಪಾದಯಾತ್ರೆ ಅಭಿಯಾನ ನಡೆಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಯಾನದ ನೇತೃತ್ವವಹಿಸಿದ್ದರು. N.P.S ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಂ, ಜಿಲ್ಲಾಧ್ಯಕ್ಷ ಸಿದ್ದರಾಜು ಬಿ.ಬಿ., ಎಂ.ವಿ.ಪುರುಷೋತ್ತಮ್, ಎಂ.ಎಲ್.ಕೃಷ್ಣೇಗೌಡ, ರಘು, ಸಿದ್ದರಾಜು ಜಿ.ಎಸ್, ಕೆಂಚರಂಗಯ್ಯ, ನಾಗಣ್ಣ, ಪ್ರಮೀಳ, ಸರಸ್ವತಿ, ಮುತ್ತಾಲಯ್ಯ, ನಾಗರಾಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.