ಮುಂಬರುವ ದಿನಗಳಲ್ಲಿ ಮ್ಯಾರಥಾನ್ 20 ಕಿ.ಮೀ. ಅಂತರದಲ್ಲಿ ನಡೆಯಬೇಕು. ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಎಲ್ಲರಿಂದಲೂ ನಡೆದಾಗ ದೇಶದ ಹಿರಿಮೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಹೇಳಿದರು.
ಮಂಡ್ಯ ತಾಲ್ಲೂಕಿನ ತಾಲೂಕಿನ ಬೇವಿನಹಳ್ಳಿ ಗ್ರಾಮದ ಶ್ರೀಸೋಮೇಶ್ವರ ಸಮುದಯ ಭವನದಲ್ಲಿ ಕಾಯಕಯೋಗಿ ಫೌಂಡೇಶನ್ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಮಂಡ್ಯ ಮ್ಯಾರಥಾನ್ ಓಟ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಓಟ ಪ್ರಗತಿಯ ಸಂಕೇತ. ಮಂಡ್ಯದಲ್ಲಿ ”ಕನ್ನಡಕ್ಕಾಗಿ ಓಡು-ಕನ್ನಡಕ್ಕಾಗಿ ಬಾಳು” ಘೋಷಣೆಯೊಂದಿಗೆ ಮ್ಯಾರಥಾನ್ ಆಯೋಜಿಸಿ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಗಳುಗಳು ಓಟದಲ್ಲಿ ಪಾಲ್ಗೊಂಡು ಸೌಹಾರ್ಧತೆ ಭಾಷಾಭಿಮಾನ ಮೆರೆದಿರುವುದು ಶ್ಲಾಘನೀಯ ಎಂದರು.
ಗಾಯಕ ಡಾ.ಮಾದೇಶ್ ಮಾತನಾಡಿ, ಕಾಯಕಯೋಗಿ ಫೌಂಡೇಶನ್ ಸಂಸ್ಥೆ ನವೆಂಬರ್ ಮಾಸದಿಂದ ಆಚೆಗೂ ಕನ್ನಡತನದ ಅಭಿಮಾನವನ್ನು ಮ್ಯಾರಥಾನ್ ಆಯೋಜಿಸುವ ಮೂಲಕ ಆಚರಣೆ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಕನ್ನಡ ಭಾಷೆ ನಿತ್ಯೋತ್ಸವವಾಗಬೇಕು. ”ಎಲ್ಲಾದರೂ ಇರು ನೀ ಎಂದೆಂದಿಗೂ ಕನ್ನಡವಾಗಿರು” ಎಂಬ ಅಭಿಮಾನ ಪ್ರತಿಯೊಬ್ಬರಲ್ಲೂ ಮೂಡಿದಾಗ ಕನ್ನಡ ಭಾಷೆ ಅಂತರಾಷ್ಟ್ರೀಯ ಮಟ್ಟದ ಹಿರಿಮೆಗೆ ಪಾತ್ರವಾಗುತ್ತದೆ ಎಂದರು.
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಸಮಾಜಸೇವಕ ಬಿ.ಎಂ.ಅಪ್ಪಾಜಪ್ಪ ಅವರು, ಕರುನಾಡಿನ ಸ್ವಾಭಿಮಾನವನ್ನು ಕೆಣಕುತ್ತಿರುವ ಮರಾಠಿಗರ ಪುಂಡಾಟವನ್ನು ಕನ್ನಡಿಗರು ಸಹಿಸುವುದಿಲ್ಲ. ಬೆಳಗಾವಿ ಗಡಿ ವಿವಾದವನ್ನು ಬೆಳೆಯಲು ಬಿಟ್ಟಿರುವ ಕೇಂದ್ರ ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.
ಬೇವಿನಹಳ್ಳಿ ಗ್ರಾ.ಪಂ.ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಜೆಡಿಎಸ್ ಯುವ ಮುಖಂಡ ಸುರೇಶ್, ಕಾಂಗ್ರೆಸ್ ಮುಖಂಡ ಚಿದಂಬರ್, ರಾಗಿಮುದ್ದನಹಳ್ಳಿ ನಾಗೇಶ್, ಡಾ.ಸ್ಪೂರ್ತಿ, ಬಿ.ಕೆ.ಅರುಣಜ್ಯೋತಿ, ಡಾ.ಯೋಗೇಶ್, ಸಿಂಹಶಿವುಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಚುಂಚಯ್ಯ ಪ್ರಾರ್ಥಿಸಿ, ಗಾಯಕ ನಾರಾಯಣಸ್ವಾಮಿ ನಿರೂಪಿಸಿದರು.