ಪಾಂಡವಪುರ ತಾಲ್ಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕ ಚಿದಾನಂದಮೂರ್ತಿ ಹಾಸ್ಟೆಲ್ ವಿದ್ಯಾರ್ಥಿನಿಯರೊಂದಿಗಿನ ಮತ್ತು ಹಾಸ್ಟೆಲ್ ನಿರ್ವಹಣಾ ಅಧಿಕಾರಿಯ ಮೇಲಿನ ಅಸಭ್ಯ ವರ್ತನೆಯನ್ನು ಎಐಡಿಎಸ್ಓ ಸಂಘಟನೆಯ ಚಂದ್ರಕಲಾರವರು ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ.
ಪತ್ರಿಕೆಯಲ್ಲಿ ವರದಿಯಾದಂತೆ ಪಾಂಡವಪುರದಲ್ಲಿನ ಶಾಲೆಯ ಮುಖ್ಯ ಶಿಕ್ಷಕ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುವುದು ನಿಜಕ್ಕೂ ಅಮಾನುಷ ಮತ್ತು ಆಘಾತಕಾರಿ ವಿಷಯವಾಗಿದೆ.
ಹಲವು ವರ್ಷಗಳಿಂದ ಕೆಟ್ಟ ಭಾಷೆಯಲ್ಲಿ ನಿಂದಿಸಿ, ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ನಡೆಯುತ್ತಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿರುವುದು ಶೋಚನೀಯ ಹಾಗೂ ಈ ಕುರಿತು ವಿದ್ಯಾರ್ಥಿನಿಯರು, ಅವರ ಪೋಷಕರು ದೂರು ಸಲ್ಲಿಸಿದ್ದರೂ ಸರ್ಕಾರವು ಯಾವುದೇ ಕ್ರಮಕೈಗೊಳ್ಳದಿರುವುದು ದುರಂತವೇ ಸರಿ!!!
ಈ ದೇಶದ ಮಹಾನ್ ವ್ಯಕ್ತಿಗಳ ಉನ್ನತ ನೀತಿ- ನೈತಿಕತೆಗಳು, ಮೌಲ್ಯ, ಸಂಸ್ಕೃತಿಗಳು, ಮರೆಯಾಗುತ್ತಿರುವುದು ಹಾಗೂ ಹೆಣ್ಣು ಮಕ್ಕಳನ್ನು ಕೇವಲ ಭೋಗದ ವಸ್ತುವನ್ನಾಗಿ ನೋಡುವ ದೃಷ್ಟಿಕೋನವೇ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸಲು ಮೂಲ ಕಾರಣವಾಗಿದೆ.
ಈ ಘಟನೆಯಲ್ಲಿ ಹೆಣ್ಣು ಮಕ್ಕಳು ತೋರಿದ ಸಾಹಸಕ್ಕಾಗಿ ಸರ್ಕಾರ ಶೌರ್ಯ ಪ್ರಶಸ್ತಿ ಘೋಷಿಸಿದೆ. ಆದರೆ ಇದಷ್ಟೆ ಸಾಲದು. ಆರೋಪಿಯನ್ನು ಬಂಧಿಸಿ ನಿದರ್ಶನೀಯ ಶಿಕ್ಷೆಯನ್ನು ಖಾತ್ರಿಪಡಿಸಬೇಕು. ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆಯನ್ನು ಖಾತ್ರಿ ಪಡಿಸಬೇಕು ಹಾಗೂ ಮುಖ್ಯವಾಗಿ ಹೆಣ್ಣು ಮಕ್ಕಳ ವಸತಿ ನಿಲಯಗಳಿಗೆ ಮಹಿಳಾ ನಿಲಯ ಪಾಲಕರನ್ನೇ ನೇಮಿಸಬೇಕು ಎಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ಆಗ್ರಹಿಸುತ್ತದೆ.
ಹಾಗೇಯೆ ಇಂತಹ ಘಟನೆಗಳು ಮರುಕಳಿಸದಂತೆ ಬೃಹತ್ ಚಳುವಳಿಗಳನ್ನು ಕಟ್ಟಲು ವಿದ್ಯಾರ್ಥಿಗಳು, ಜನ ಸಾಮಾನ್ಯರು ಮುಂದಾಗಬೇಕೆಂದು ಈ ಮೂಲಕ ಎಐಡಿಎಸ್ಓ ಕರೆನೀಡುತ್ತದೆ.