ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿನ ಮುಂದಿನ ನಡೆ ನಿರ್ಧರಿಸಲು ನಿರ್ಮಲಾನಂದನಾಥ ಶ್ರೀಗಳ ಜೊತೆ ಚರ್ಚಿಸಿ ಮುಂದುವರೆಯಲು ಕಾಂಗ್ರೆಸ್ ಒಕ್ಕಲಿಗೆ ಮುಖಂಡರು ನಿರ್ಧರಿಸಿದ್ದಾರೆ.
ಈ ಸಂಬಂಧ ಇಂದು ಬೆಂಗಳೂರಿನಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದನಾಥ ಶ್ರೀಗಳನ್ನ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಸಭೆ ಸೇರಿದ ಕಾಂಗ್ರೆಸ್ ಒಕ್ಕಲಿಗೆ ಮುಖಂಡರು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಚರ್ಚೆ ವೇಳೆ ಮೀಸಲಾತಿ ವಿಚಾರವೂ ಮುನ್ನೆಲೆಗೆ ಬಂದು, ಪಕ್ಷ ಬೆಂಬಲಿಸಲು ಅಗತ್ಯವಾಗಿರುವ ವಿಚಾರದ ಬಗ್ಗೆ ಸುದೀರ್ಘ ಮಾತುಕತೆ ನಡೆಯಿತು. ಈ ವೇಳೆ ಒಕ್ಕಲಿಗ ಸಮಾಜದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಯಾವ ಕಾರಣಕ್ಕೆ ಮತ ನೀಡಬೇಕು ಎಂದು ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಇದರ ಬಗ್ಗೆ ಚರ್ಚೆ ಮಾಡಿದ ಮುಖಂಡರು, ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿಗಳು, ನಾನಾ ಸಂಘಟನೆಗಳ ಮುಖಂಡರು ತಮ್ಮ ಬಳಿ ಹೇಳಿಕೊಂಡ ನೋವಿನ ವಿಚಾರವನ್ನು ಸಭೆ ಗಮನಕ್ಕೆ ತಂದರು. ಇದಾದ ಬಳಿಕ ಸಭೆಯಲ್ಲಿ ಚರ್ಚಿತವಾದ ವಿಚಾರ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಪಡೆದುಕೊಳ್ಳುವುದಕ್ಕೆ ನಿರ್ಧರಿಸಿತ್ತು. ಜೊತೆಗೆ, ಮೀಸಲಾತಿ ಕಲ್ಪಿಸಲು ಮಠದ ಸ್ವಾಮೀಜಿಗಳು ಗಡುವು ನೀಡಿರುವ ವಿಚಾರದ ಬಗೆಗೂ ಚರ್ಚೆ ನಡೆದಿದ್ದು, ಮುಂದಿನ ಹಾದಿಯಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಏನು ಎಂಬುವುದರ ಬಗ್ಗೆ ಚರ್ಚೆ ನಡೆಸಲಾಯಿತು.
ಉಳಿದಂತೆ, ಸಮಾಜದ ಹಕ್ಕು ಕೇಳಲು ಪಕ್ಷದ ನಾಯಕರು ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತನಾಡುವುದು ಹಾಗೂ ಈ ಬಗ್ಗೆ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ ಮಾಡುವುದರ ಬಗ್ಗೆ ನಿಲುವು ತೆಗೆದುಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಇಂದು ಸಂಜೆ 7.30ಕ್ಕೆ ಚುಂಚಶ್ರೀಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲು ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ.