ಹಾಲಿ ಶಾಸಕ ಎಂ.ಶ್ರೀನಿವಾಸ್ ರವರಿಗೆ ಜೆಡಿಎಸ್ ವರಿಷ್ಠರಾದ ಕುಮಾರಸ್ವಾಮಿ ನಾಲ್ಕನೇ ಬಾರಿಗೆ ಬಿ.ಫಾರಂ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಎಂ.ಶ್ರೀನಿವಾಸ್ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.
ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಜಮಾವಣೆಗೊಂಡ ಜೆಡಿಎಸ್ ಕಾರ್ಯಕರ್ತರು ಹಾಗೂ ಎಂ.ಶ್ರೀನಿವಾಸ್ ಅಭಿಮಾನಿಗಳು ಶಾಸಕ ಶ್ರೀನಿವಾಸ ಪರ ಘೋಷಣೆ ಕೂಗಿ ಜೆಡಿಎಸ್ ವರಿಷ್ಠರಾದ ದೇವೇಗೌಡರು ಮತ್ತು ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸಿದರು. ಶಾಸಕ ಎಂ.ಶ್ರೀನಿವಾಸ್ ರವರಿಗೆ ಪುಷ್ಪಹಾರ ಹಾಕಿ, ಸಿಹಿ ತಿನ್ನಿಸಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಶ್ರೀನಿವಾಸ್ ನಮ್ಮ ನಾಯಕರಾದ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ನನಗೆ ನಾಲ್ಕನೇ ಬಾರಿಗೆ ಶಾಸಕನಾಗಲು ಜೆಡಿಎಸ್ ಬಿ.ಫಾರಂ ಘೋಷಣೆ ಮಾಡಿರುವುದು ಸಂತೋಷ ತಂದಿದೆ. ಇದಕ್ಕೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ನಾನು ಗೆಲ್ಲುವುದು ಖಚಿತವಾಗಿದ್ದು, ಮಂಡ್ಯ ಜನತೆಯ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.
ನಗರಸಭಾ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಶಾಸಕ ಎಂ.ಶ್ರೀನಿವಾಸ್ ರವರಿಗೆ ಬಿ. ಫಾರಂ ಘೋಷಿಸಿರುವುದು ಸಂತೋಷದ ವಿಷಯವಾಗಿದೆ. ನಮ್ಮ ಶಾಸಕರು ಏನೇ ಕಷ್ಟ ಬಂದರೂ ಪಕ್ಷ ತ್ಯಜಿಸದೆ ವರಿಷ್ಠರ ನಂಬಿಕೆಗೆ ಪಾತ್ರರಾಗಿದ್ದರು. ಅವರ ಈ ನಂಬಿಕೆಗೆ ಜೆಡಿಎಸ್ ವರಿಷ್ಠರು ಬಿ. ಫಾರಂ ಘೋಷಣೆ ಮಾಡಿದ್ದು, 2023ರ ಚುನಾವಣೆಯಲ್ಲಿ ಅವರನ್ನು 50,000 ಮತಗಳ ಅಂತರದಿಂದ ಜಯಶೀಲರನ್ನಾಗಿಸಿ ಶಾಸಕರನ್ನಾಗಿ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ತಿಮ್ಮೇಗೌಡ, ಮುದ್ದನಘಟ್ಟ ಮಹಾಲಿಂಗೇಗೌಡ, ಪುಟ್ಟಸ್ವಾಮಿ, ಲಿಂಗರಾಜು ಮತ್ತಿತರರಿದ್ದರು.