ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಸಂಘದ ಅಭಿವೃದ್ಧಿ ಜೊತೆಗೆ ಹಾಲು ಒಕ್ಕೂಟದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹಾಲು ಉತ್ಪಾದಕರಿಗೆ ಸಲಹೆ ನೀಡಿದರು.
ಕೆ ಆರ್ ಪೇಟೆ ಪಟ್ಟಣದ ತಾಲೂಕು ಹಾಲು ಉತ್ಪಾದಕರ ಕಚೇರಿಯ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ನಡೆದ ವಿವಿಧ ಯೋಜನೆಗಳ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕರು ವೈಯುಕ್ತಿಕ ಹಾಗೂ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ರೈತರು ಶೇ.25 ರಷ್ಟು ವಿಮಾ ಕಂತನ್ನು ಪಾವತಿ ಮಾಡಿದರೆ ಸಾಕು. ಉಳಿದ ಶೇ.75ರಷ್ಟು ವಿಮಾ ಕಂತನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಪಾವತಿ ಮಾಡುವ ಮೂಲಕ ರೈತರ ಹಿತಾಸಕ್ತಿ ಅನುಗುಣವಾಗಿ ಕೆಲಸ ಮಾಡುತ್ತಿದೆ ಎಂದರು.
ಒಕ್ಕೂಟದ ವತಿಯಿಂದ ಸಬ್ಸಿಡಿ ದರದಲ್ಲಿ ಸಿಗುವ ಹಾಲು ಕರೆಯುವ ಯಂತ್ರ, ರಾಸುಗಳ ನೆಲಹಾಸು, ಮೇವು ಕತ್ತರಿಸುವ ಯಂತ್ರಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಯಲ್ಲಿ ಉತ್ಪಾದಕರು ಕನಿಷ್ಠ ಎರಡು ಮಹಾಸಭೆಗೆ ಕಡ್ಡಾಯವಾಗಿ ಭಾಗವಹಿಸಿ ನಡಾವಳಿ ಪುಸ್ತಕಕ್ಕೆ ಸಹಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮನ್ಮುಲ್ ಉಪ ವ್ಯವಸ್ಥಾಪಕ ಮರಿರಾಚಯ್ಯ, ಮನ್ಮುಲ್ ಮಾರ್ಗ ವಿಸ್ತರಣಾಧಿಕಾರಿ ನಾಗಪ್ಪ ಅಲ್ಲಿ ಬಾದಿ, ಶಿವಶಂಕರ್, ಮುಖಂಡ ಹಾದನೂರು ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.