ಕಳೆದ ಚುನಾವಣೆಯಲ್ಲಿ ನನ್ನ ಮೇಲಿನ ಕೋಪದಿಂದ ಬೇರೊಬ್ಬರ ಗೆಲ್ಲಿಸಿ,ನನಗೆ ಶಿಕ್ಷೆ ನೀಡಿದ್ದೀರಿ. ಶ್ರೀರಂಗಪಟ್ಟಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ 2023 ರ ಚುನಾವಣೆಯಲ್ಲಿ ನನಗೆ ಆಶೀರ್ವದಿಸಬೇಕೆಂದು ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಮನವಿ ಮಾಡಿದರು.
ಮಂಡ್ಯ ತಾಲೂಕಿನ ಕೊತ್ತತ್ತಿ ಹೋಬಳಿ ಘಟಕ ೨ರ ಹೆಬ್ಬಕವಾಡಿ ಗ್ರಾಮದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ಸರ್ಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಿದೆ. ನೆಮ್ಮದಿಯಾಗಿ ಬದುಕುತ್ತಿದ್ದ ಬಡವರನ್ನು ಮತ್ತಷ್ಟು ಬಡತನಲ್ಲಿರಿಸಲು ಜಿ ಎಸ್ ಟಿ ಹೇರಿದೆ. ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಲು ಹತ್ತಾರು ಯೋಜನೆಗಳನ್ನು ರೂಪಿಸಿರುವುದು ನಿಮಗೆಲ್ಲ ಗೊತ್ತಿದೆ, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಗ್ಯಾಸ್, ಪೆಟ್ರೋಲ್, ಡೀಸಲ್, ವಿದ್ಯುತ್ ದರ ಏರಿಸಿ ಭ್ರಷ್ಟ ಆಡಳಿತ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಳೆದ ಚುನಾವಣೆಯಲ್ಲಿ ನನ್ನ ಮೇಲಿನ ಕೋಪದಿಂದ ಇನ್ನೊಬ್ಬರನ್ನು ಗೆಲ್ಲಿಸಿದ್ದಕ್ಕೆ ಯಾವ ಗ್ರಾಮಗಳೂ ಅಭಿವೃದ್ದಿಯಾಗಿಲ್ಲ. ಪ್ರತಿ ಗ್ರಾಮಗಳ ಮುಖಂಡರು ಬಂದು ಹೇಳುತ್ತಾರೆ, ನಿಮ್ಮನ್ನೇ ಗೆಲ್ಲಿಸಬೇಕಿತ್ತು, ನಮ್ಮ ಊರುಗಳು ಅಭಿವೃದ್ದಿಯಾಗುತ್ತಿದ್ದವು ಎಂದು, ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಗ್ರಾಮಾಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.
ಕೊತ್ತತ್ತಿ ಹೋಬಳಿ ವ್ಯಾಪ್ತಿಯಲ್ಲಿ ಯಾವ ಗ್ರಾಮಗಳೂ ಸಮಗ್ರ ಅಭಿವೃದ್ದಿ ಕಂಡಿಲ್ಲ. ನಾನು ಅವರಿವರನ್ನು ದೂಷಿಸುವುದಿಲ್ಲ, ನೇರವಾಗಿ ನೀವೇ ನಿಮ್ಮ ಗ್ರಾಮಗಳ ರಸ್ತೆ, ಚರಂಡಿ, ಸ್ಥಳೀಯ ಸಮಸ್ಯೆಗಳನ್ನು ಕಂಡು ನೋವು ಅನುಭವಿಸಿದ್ದೀರಿ, ಮತ್ತೆ ಇಂತಹದ್ದೇ ನೋವನ್ನು ನಾವು ನೀಡುವುದಿಲ್ಲ. ನಿಮ್ಮಗಳ ಕಷ್ಟ-ಸಂಕಷ್ಟಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸಫಲರಾಗುತ್ತೇವೆ ನಮಗೆ ಶಕ್ತಿ ನೀಡಿ ಎಂದು ಮನವಿ ಮಾಡಿದರು.
ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಮತ್ತು ಮಾಜಿ ಶಾಸಕ ಆತ್ಮಾನಂದ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿ ಮಾರಸಿಂಗನಹಳ್ಳಿ, ತಿಮ್ಮನ ಹೊಸೂರು, ಲೋಕಸರ, ಹೆಬ್ಬಕವಾಡಿ, ಮಂಗಲ ಗ್ರಾಮಗಳಲ್ಲಿನ ಹಲವು ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಸೋನಿಯಾಗಾಂಧಿ ಬ್ರಿಗೇಡ್ ಅಧ್ಯಕ್ಷೆ ವೀಣಾ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರಾದ ಕೊತ್ತತ್ತಿ ರಾಜು, ರಮೇಶ್ಮಿತ್ರ, ಗಿರೀಶ್, ನಾಗರಾಜು ಹೆಬ್ಬಕವಾಡಿ, ಪ್ರತಾಪ್, ತಿಮ್ಮೇಗೌಡ, ಅಶ್ವಥ್, ಶೇಖರ್, ವೃಂದ, ಕೀರ್ತಿ, ಪ್ರತಿಭಾ, ಸೋಮಶೇಖರ್ ಮತ್ತಿತರರಿದ್ದರು.