ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಮಾದರಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುವುದು ಅಗತ್ಯ ಎನಿಸಿದೆ. ನೀರು ನಿರ್ವಹಣೆ ತುಂಬಾ ವ್ಯವಸ್ಥಿತ ಜಾಲವಾಗಿದ್ದು, ಸಹಭಾಗಿತ್ವದಲ್ಲಿ ಸಾಮೂಹಿಕ ಹೊಣೆಗಾರಿಕೆಯಿಂದ ರೈತರು ಇದರ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕಿದೆ ಎಂದು ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಭೂ ಅಭಿವೃದ್ಧಿ ಅಧಿಕಾರಿ ಶಿವಪ್ರಕಾಶ್ ತಿಳಿಸಿದರು.
ಮೈಸೂರು ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನೀರು ಬಳಕೆದಾರರ ಸಹಕಾರ ಸಂಘಗಳಲ್ಲಿ ನಿಯಮಗಳಿಗನುಗುಣವಾಗಿ ಸರ್ವ ಸದಸ್ಯರ ಸಭೆ ಮತ್ತು ಕಾರ್ಯಕಾರಿಣಿ ಸಭೆಗಳನ್ನು ನಿಗಧಿತ ಅವಧಿಯೊಳಗೆ ಮಾಡಿ, ಸಭಾ ನಿರ್ಣಯದ ಮೂಲಕ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಹೇಳಿದರು.
ನೀರಾವರಿ ಕಾಯಿದೆ ಮತ್ತು ಸಹಕಾರ ಕಾಯ್ದೆಗಳ ಅಡಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ಕ್ಷಿಷ್ಟಕರ ಸಮಸ್ಯೆಗಳಿದ್ದರೂ, ನೀರಿನ ಕರ ವಸೂಲಿ ಮೂಲಕ ಸಂಘಗಳು ಆರ್ಥಿಕ ಬಲವರ್ಧನೆಯನ್ನು ಸಾಧಿಸಬೇಕಿದೆ ಎಂದರು.
ಅಣೆಕಟ್ಟೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗೀಕರಣ ಮಾಡಲು ಹೊರಟಿರುವ ಸಂದರ್ಭದಲ್ಲಿ ಇಡೀ ದೇಶದಲ್ಲೇ ಸಹಕಾರ ಕಾಯ್ದೆಯಡಿ ನೀರು ಬಳಕೆದಾರರ ಸಹಕಾರ ಸಂಘ ರಾಜ್ಯದಲ್ಲಿ ಮಾತ್ರ ಇದೆ. ಬಹುತೇಕ ಅಣೆಕಟ್ಟೆಗಳಲ್ಲಿ ಎಲ್ಲಾ ಋತುಮಾನಗಳಲ್ಲೂ ನೀರು ಹರಿಸಲಾಗುತ್ತಿಲ್ಲ. ವಿಶೇಷವೆಂದರೆ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ಎಲ್ಲಾ ಕಾಲದಲ್ಲೂ ಕಾಲುವೆ ಮೂಲಕ ನೀರು ಹರಿಯುತ್ತದೆ. ನೀರಿನ ಮಿತ ಬಳಕೆ ಮೂಲಕ ಬೆಳೆ ನಿರ್ವಹಣೆ ಮಾಡಿ ಆದಾಯೋತ್ಪನ್ನ ಚಟುವಟಿಕೆಗಳ ವಿಶೇಷ ಗಮನ ಹರಿಸಬೇಕಾಗಿದೆ ಎಂದರು.
ಕೊಮ್ಮೇರಹಳ್ಳಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಕಾಡಾದ ಸಹಕಾರ ವಿಭಾಗದ ಸಹಾಯಕ ನಿಬಂಧಕ ರವಿಕುಮಾರ್, ಶೋಭ, ಸಹಾಯಕ ಕೃಷಿ ನಿರ್ದೇಶಕಿ ಜಯಭಾರತಿ, ಸಹಕಾರ ನಿರೀಕ್ಷಕಿ ಪಂಕಜ, ಮಂಗಲ ಯೋಗೀಶ್, ಸಂಪನ್ಮೂಲ ವ್ಯಕ್ತಿಯಾಗಿ ಸಹಕಾರ ಇಲಾಖೆಯ ನಿವೃತ್ತ ಸಹಕಾರ ಇಲಾಖೆಯ ಶಿವಸ್ವಾಮಿ, ಇಂಜಿನಿಯರ್ ಕೆಂಪರಾಜು ಭಾಗವಹಿಸಿದ್ದರು.