ಪ್ರವರ್ಗ-1ರ ಅಡಿ ಬರುವ ಎಲ್ಲಾ ಜಾತಿಗಳ ಮಂಡ್ಯ ಜಿಲ್ಲಾ ಸಮಾವೇಶ ಹಾಗೂ ನೂತನ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಂಡ್ಯನಗರದ ರೈತಸಭಾಂಗಣದಲ್ಲಿ ಡಿ.24ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಲಿಂಗಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಸಮಾರಂಭ ಉದ್ಘಾಟಿಸಲಿದ್ದು, ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲೆಯ ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಹಾಗೂ ಸುರೇಶ್ ಗೌಡ ಸೇರಿದಂತೆ ಹಲವು ಮುಖಂಡರು ಭಾಗವಹಿಸುವರು ಎಂದರು.
ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಇರುವಂತಹ ಅತೀ ಹಿಂದುಳಿದಿರುವ ಪ್ರವರ್ಗ-1ರ ಜಾತಿಗಳ ಜನರ ಹಿತಾಸಕ್ತಿಗೆ ಮತ್ತು ಈ ಜನರ ಅಭಿವೃದ್ಧಿಗೆ ಪೂರಕವಾಗಿ ಕರ್ನಾಟಕ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟ ಪ್ರಾರಂಭವಾಗಿದ್ದು, ಪ್ರವರ್ಗ-1 ರ ಜಾತಿಗಳ ಆಡಿ ಬರುವಂತಹ 95 ಜಾತಿಗಳ ಸಂಘಟನೆಗಳ ಮುಖಂಡರು ಒಕ್ಕೂಟದ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಒಕ್ಕೂಟ ರಾಜ್ಯ ಕಾರ್ಯದರ್ಶಿ ನಾಗರತ್ನ, ಕಾರ್ಯದರ್ಶಿ ಈರಯ್ಯ, ಪದಾಧಿಕಾರಿಗಳಾದ ಹಾಡ್ಯ ಉಮೇಶ್, ದೇವರಾಜು, ಹೇಮಾಮೂರ್ತಿ ಹಾಘೂ ಕರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.