ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾದರೆ ಹೋರಾಟದ ಅನಿವಾರ್ಯತೆ ಇದ್ದೇ ಇರುತ್ತದೆ. ಒಕ್ಕಲಿಗರ ಸಮಾಜದ ವಿದ್ಯಾರ್ಥಿಗಳು ಇಷ್ಟು ದಿನ ಹೇಗೋ ಕಷ್ಟಪಟ್ಟು ಒಂದಷ್ಟು ಕೆಲಸಗಳನ್ನು ತೆಗೆದುಕೊಂಡಿದ್ದಾರೆ, ಇಂತಹ ಹರಸಾಹಸವನ್ನು ಎಲ್ಲಿತನಕ ಮಾಡಬೇಕು, ಒಕ್ಕಲಿಗ ಸಮಾಜವು ಹೋರಾಟಕ್ಕೆ ಸಿದ್ಧವಾಗಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಕರೆ ನೀಡಿದರು.
ಮಂಡ್ಯನಗರದ ಗಾಂಧಿ ಭವನದಲ್ಲಿ ವಿಶ್ವ ಒಕ್ಕಲಿಗರ ಜನ ಜಾಗೃತಿ ಸಂಘ, ಒಕ್ಕಲಿಗ ಧರ್ಮ ಮಹಾಸಭಾದ ವತಿಯಿಂದ ನಡೆದ ಒಕ್ಕಲಿಗರ ಜನಸಂಖ್ಯಾ ಆಧಾರದ ಮೇಲೆ ಶೇ.18 ರಷ್ಟು ಮೀಸಲಾತಿಗಾಗಿ ಸರ್ಕಾರವನ್ನು ಆಗ್ರಹಿಸಿ ಪತ್ರ ಚಳವಳಿ ಹಾಗೂ ಪ್ರಚಾರಾಂದೋಲನ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇನ್ನಾದರೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗಬೇಕು. ನಮ್ಮ ಸಮುದಾಯದ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಮಾಡಬೇಕು. ಮುಖ್ಯವಾಹಿನಿಗೆ ನಮ್ಮ ಸಮುದಾಯ ಬರಬೇಕು. ಪ್ರಶ್ನೆ ಮಾಡುವ ಬೆಳವಣಿಗೆ ಆಗಬೇಕು, ಆರ್ಥಿಕವಾಗಿ ಹಿಂದುಳಿದಿರುವ ಒಕ್ಕಲಿಗರ ಸಮುದಾಯಕ್ಕೆ ಮೀಸಲಾತಿಯನ್ನು ಸರ್ಕಾರ ಹೆಚ್ಚಳ ಮಾಡಬೇಕು ಎಂದರು.
ಒಕ್ಕಲಿಗ ಸಮುದಾಯದಲ್ಲಿ ರೈತರು, ಯುವಕರು ಸೇರಿದಂತೆ ಎಲ್ಲರಿಗೂ ಅನ್ಯಾಯವಾಗುತ್ತಿದೆ. ಪಕ್ಷದ ವರಿಷ್ಠರನ್ನು ನಾವೆಲ್ಲರೂ ಒಪ್ಪಿಸುವ ಮೂಲಕ ಹೋರಾಟ ಮಾಡೋಣ, ಚುಂಚಶ್ರೀಗಳ ಆಶೀರ್ವಾದ ಹಾಗೂ ಅವರ ಸಲಹೆ ಮೇರೆಗೆ ಹೋರಾಟ ಮಾಡೋಣ ಎಂದು ತಿಳಿಸಿದರು.
ಒಕ್ಕಲಿಗರು ಯಾವುದೇ ಸಮಾಜವನ್ನು ಕಡೆಗಣಿಸಿಲ್ಲ, ಯಾರನ್ನೂ ತೇಜೋವಧೆ ಮಾಡೊಲ್ಲ, ರೈತರ ಪರವಾಗಿರುವ ಸಮುದಾಯ ಒಕ್ಕಲಿಗರ ಸಮುದಾಯವಾಗಿದೆ. ಆದರೆ ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿ ಎಂಬ ಕೂಗು ಬರುತ್ತಿದೆ. ಬೇರೆ ಸಮಾಜಕ್ಕೆ ಹೋಲಿಸಿಕೊಂಡರೆ ಒಕ್ಕಲಿಗರ ಸಮಾಜವು ಹೋರಾಟದಲ್ಲಿ ಹಿಂದೆ ಉಳಿದಿದೆ ಎಂದು ವಿಷಾದಿಸಿದರು.
ಕುಣಿಗಲ್ ಅರೇ ಶಂಕರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸಿದ್ಧರಾಮಚೈತನ್ಯ ಸ್ವಾಮೀಜಿ ಮಾತನಾಡಿ, ಇಡೀ ಭಾರತದಲ್ಲಿ ಎರಡು ರೀತಿಯ ಮೀಸಲಾತಿಯಿದೆ. ಒಂದು ಧರ್ಮಾಧರಿತ ಮೀಸಲಾತಿ, ಮತ್ತೊಂದು ಜಾತ್ಯಾತೀತ ಮೀಸಲಾತಿ ಇದೆ. ಧರ್ಮದಾರಿತ ಮುಸ್ಲಿಂ ಹಾಗೂ ಕ್ರಿಶ್ಚಿಯನ್ರಿಗೆ ಇದೆ. ಜಾತಿವಾರುಗಳಿಗೆ ಬಂದರೆ ಅದರಲ್ಲಿಯೂ ಕರ್ನಾಟದಲ್ಲಿ ಒಕ್ಕಲಿಗರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಒಕ್ಕಲಿಗರ ಬೇರು ಎಲ್ಲಿದೆ ಎಂಬುದು ಗೊತ್ತಿಲ್ಲ ಎಂದರು.
ಒಕ್ಕಲಿಗರ ಸಮುದಾಯ ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ವಿವಿಧ ತಾಂತ್ರಿಕ ವಿಷಯಗಳಲ್ಲಿ ಒಕ್ಕಲಿಗ ವಿದ್ಯಾರ್ಥಿಯು, ಅನ್ಯ ಸಮುದಾಯದ ವಿದ್ಯಾರ್ಥಿಗಿಂತ ಹೆಚ್ಚು ಅಂಕ ಪಡೆದಿದ್ದರೂ ಸಹ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗುವುದಿಲ್ಲ, ಕಡಿಮೆ ಅಂಕ ಪಡೆದಿರುವ ಬೇರೆ ಸಮುದಾಯದ ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತಿದೆ. ಕೇವಲ ಒಕ್ಕಲಿಗರ ಪ್ರಭಾವಿಗಳೆಂದು ತಿಳಿದಿದ್ದೇವೆ ಅಷ್ಟೆ. ಹಾಗಾಗಿ ಮೀಸಲಾತಿ ಹೆಚ್ಚಳಕ್ಕೆ ಪ್ರತಿಭಟನೆ ಆರಂಭಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಒಕ್ಕಲಿಗರ ಸಮುದಾಯಕ್ಕೆ ಮಿಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪತ್ರ ಚಳವಳಿ ಹಾಗೂ ಪ್ರಚಾರಾಂದೋಲನದ ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು. ನಂತರ ಹೊಸ ವರ್ಷದ 2023ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಜಿ.ಸಿದ್ದರೂಢ (ಸತೀಶ್ಗೌಡ), ಕಸ್ತೂರಿ ಕನ್ನಡ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ಗೌಡ, ವಿಶ್ವ ಒಕ್ಕಲಿಗರ ಜನಜಾಗೃತಿ ಸಂಘದ ರಾಜ್ಯಾಧ್ಯಕ್ಷ ಕೆ.ಎಂ.ರಾಮಕೃಷ್ಣ, ಕರುನಾಡು ಸೇವಕರು ಸಂಘಟನೆ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಮುಖಂಡರಾದ ಸಿ.ಎಂ.ಕ್ರಾಂತಿಸಿಂಹ, ಉಮಾಶಂಕರ್, ಶಿವಲಿಂಗೇಗೌಡ ಎಚ್.ಸಿ., ಲಕ್ಷ್ಮಿಮಂಜುಳ ಬೋರೇಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.