ಉತ್ತಮ ಗುಣಮಟ್ಟದ ಔಷಧಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಜನರ ಆರೋಗ್ಯ ಕಾಪಾಡುವಲ್ಲಿ ಔಷಧ ವ್ಯಾಪಾರಿಗಳ ಪಾತ್ರ ಪ್ರಮುಖವಾದದ್ದು ಎಂದು ಮಂಡ್ಯ ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಮೊಹಮ್ಮದ್ ಔಹಾರ್ ಖಾಲಿದ್ ಸಲಹೆ ನೀಡಿದರು.
ಮಂಡ್ಯ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ಮಂಡ್ಯನಗರದ ಔಷಧ ಭವನದಲ್ಲಿ ನಡೆದ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನರ ಆರೋಗ್ಯದ ದೃಷ್ಠಿಯಿಂದ ಒಳ್ಳೆಯ ಔಷಧಗಳನ್ನೇ ನೀಡಬೇಕು. ಮಾದಕ ವ್ಯಸನಿಗಳಿಗೆ ಯಾವುದೇ ಕಾರಣಕ್ಕೂ ಮಾದಕ ಔಷಧಗಳನ್ನು ನೀಡಬಾರದು ಎಂದು ಕಿವಿಮಾತು ಹೇಳಿದರು.
ಪ್ರಧಾನ ಸರ್ಕಾರಿ ಅಭಿಯೋಜಕ ಎಚ್.ಇ.ಚಿನ್ನಪ್ಪ ಮಾತನಾಡಿ, ಮಾದಕ ಔಷಧಗಳನ್ನು ವೈದ್ಯರ ಸಲಹೆ ಇಲ್ಲದೆ ಮಾರಾಟ ಮಾಡುವುದು ಅಪರಾಧ. ಒಂದು ವೇಳೆ ಮಾರಾಟ ಮಾಡಿದ್ದು, ಕಂಡುಬಂದಲ್ಲಿ ಅದು ಸಾಬೀತಾದಲ್ಲಿ ಕನಿಷ್ಟ 10 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ದಂಡವನ್ನು ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರಿ ವಕೀಲ ಗಿರೀಶ್ ಮಾತನಾಡಿ, ಔಷಧ ವ್ಯಾಪಾರಿಗಳಿಗೆ ಕಾನೂನು ಅರಿವು ಕುರಿತಂತೆ ಉಪನ್ಯಾಸ ನೀಡಿದರು. ಸಂಘದ ಅಧ್ಯಕ್ಷ ಎಂ.ಪಿ. ಲೋಕಾನಂದ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ್ ಆಸ್ಪತ್ರೆ ವತಿಯಿಂದ ಸಂಘದ ಸದಸ್ಯರಿಗೆ ಆರೋಗ್ಯ ಕಾರ್ಡ್ ವಿತರಿಸಲಾಯಿತು. ಇದೇ ವೇಳೆ ಸಂಘದ ಹಿರಿಯ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಬಿ.ನಾರಾಯಣ್, ಕಾರ್ಯದರ್ಶಿ ಬಿ.ನಂದೀಶ್, ಸಹ ಕಾರ್ಯದರ್ಶಿ ದೇವೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.