ಕೊಟ್ಟ ಮಾತಿನಂತೆ ಗ್ರಾಮಕ್ಕೆ ತೆರಳಿದ ತಹಶೀಲ್ದಾರ್ ಕುಂಞ ಅಹಮದ್ ಅವರು ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಗುರುವಾರ ಸಂಜೆ 7 ಗಂಟೆಯ ವೇಳೆಯಲ್ಲಿ ಮಂಡ್ಯ ತಾಲ್ಲೂಕಿನ ಕಾರಸವಾಡಿ ಗ್ರಾಮಕ್ಕೆ ಆಗಮಿಸಿ ತಹಶೀಲ್ದಾರ್ ಹಾಗೂ ಸಿಬ್ಬಂದಿ ಭೂ ವಿವಾದ, ಖಾತೆ ಬದಲಾವಣೆ, ಆರ್.ಟಿ.ಸಿ ತಿದ್ದುಪಡಿ, ಪಡಿತರ ಸಮಸ್ಯೆ, ಸಾಮಾಜಿಕ ಭದ್ರತಾ ಯೋಜನೆ ಮುಂತಾಗಿ ಹಲವು ಕಂದಾಯ ಇಲಾಖೆ ಸಮಸ್ಯೆ ಕುರಿತು ಅರ್ಜಿ ಸ್ವೀಕರಿಸಿ ಕೆಲವು ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಿದರು.
ಈ ವೇಳೆ ಮಾತನಾಡಿದ ತಹಶೀಲ್ದಾರ್, ಗ್ರಾಮಸ್ಥರು ತಮ್ಮ ಸಮಸ್ಯೆ ಕುರಿತು ತಾಲ್ಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಗ್ರಾಮದಲ್ಲೇ ಅಧಿಕಾರಿಗಳ ಜೊತೆಗೂಡಿ ಇತ್ಯರ್ಥಪಡಿಸಲು ಮುಂದಾಗಿರುವುದಾಗಿ ತಿಳಿಸಿದರು.
ಈ ವೇಳೆ ರಾಜಸ್ವ ನಿರೀಕ್ಷಕ ತಮ್ಮಣ್ಣಗೌಡ, ಗ್ರಾಮ ಆಡಳಿತಾಧಿಕಾರಿ ದೇವಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ, ಗ್ರಾಪಂ ಮಾಜಿ ಅಧ್ಯಕ್ಷೆ ಸೌಮ್ಯ, ಸದಸ್ಯರಾದ ಮಮತಾ, ಮುಖಂಡರಾದ ಬಸವರಾಜ್, ಪ್ರಕಾಶ್ ಮೊದಲಾದವರಿದ್ದರು.