ಮುಂದಿನ ದಿನಗಳಲ್ಲಿ ಸ್ವಾಭಿಮಾನಿ ಮಾದಿಗರ ಮಹಾಸಭಾದಿಂದ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡುವ ಸದುದ್ದೇಶವಿದೆ ಎಂದು ಸ್ವಾಭಿಮಾನಿ ಮಾದಿಗರ ಮಹಾಸಭಾದ ಮುಖಂಡ ಸಿ.ಕೆ.ಪಾಪಯ್ಯ ಹೇಳಿದರು.
ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸ್ವಾಭಿಮಾನಿ ಮಾದಿಗರ ಮಹಾಸಭಾ ಜಿಲ್ಲಾ ಸಮಿತಿ ಆಯೋಜಿಸಿದ್ದ ಸ್ವಾಭಿಮಾನಿ ಮಾದಿಗರ ಪ್ರಥಮ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ಮಾದಿಗ ಜನಾಂಗದವರು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಕಾರಣ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಅಗತ್ಯವಾದ ಎಲ್ಲಾ ಕಾರ್ಯಕ್ರಮ ರೂಪಿಸಲು ಚರ್ಚಿಸುತ್ತಿದ್ದೇವೆ ಎಂದು ತಿಳಿಸಿದರು.
ಆರ್ಥಿಕ ಸಬಲೀಕರಣಕ್ಕಾಗಿ ಸಹಕಾರ ಬ್ಯಾಂಕ್ ಸ್ಥಾಪನೆ ಮತ್ತು ಸಮಗ್ರ ಉದ್ಯೋಗಕ್ಕಾಗಿ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸುವ ಹೋರಾಟಕ್ಕೆ ಚಿಂತನೆ ನಡೆಯುತ್ತಿದೆ, ಮಾದಿಗ ಸಮುದಾಯದ ರಾಜಕೀಯ ಶಕ್ತಿ ಬಲವರ್ಧನೆಗಾಗಿ ರೂಪುರೇಷೆಗಳು ಚರ್ಚೆಗೆ ಬರಬೇಕಿದೆ ಎಂದು ನುಡಿದರು.
ಕರ್ನಾಟಕ ಸ್ವಾಭಿಮಾನಿ ಮಾದಿಗರ ಮಹಾಸಭಾದಿಂದ ಎಲ್ಲಾ ಪಕ್ಷಗಳಲ್ಲಿರುವ ಮಾದಿಗ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಒಮ್ಮತ್ತದ ನಿರ್ಣಯ ಕೈಗೊಂಡು, ಏಕಶಕ್ತಿಯಾಗಿ ಆರ್ಥಿಕ ಸಬಲೀಕರಣಕ್ಕೆ ರಾಜ್ಯ, ಜಿಲ್ಲಾ, ತಾಲೂಕು, ಹೋಬಳಿ ವ್ಯಾಪ್ತಿಯ ಸಹಕಾರ ಬ್ಯಾಂಕ್ ಸ್ಥಾಪನೆ ಮುನ್ನುಡಿ ಬರೆಯಲು ಆಲೋಚನೆ ಸಿದ್ದವಾಗಿದ್ದು, ಕಾರ್ಯಗತಗೊಳಿಸುವ ವಿಧಾನಗಳನ್ನು ಚಿಂತಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸ್ವಾಭಿಮಾನಿ ಮಾದಿಗರ ಮಹಾಸಭಾದ ರಾಜ್ಯ ಉಸ್ತುವಾರಿ ಸಿ.ಶೇಖರ್, ಜಿಲ್ಲಾ ಸಂಘಟನಾ ಉಸ್ತುವಾರಿ ಬಿ.ಕೃಷ್ಣ, ಪುಟ್ಟಸ್ವಾಮಿ ಕನ್ನಲಿ, ಮಹದೇವಯ್ಯ, ನಿವೃತ್ತ ಅಧಿಕಾರಿ ಅನ್ನದಾನಿ, ಹೋರಾಟಗಾರ ನಂಜುಂಡ ಮೌರ್ಯ, ಡಿ.ರಾಜು, ಶಿವರಾಜ್ ಮರಳಿಗ, ಶಿವಕುಮಾರ್, ಸಿದ್ದರಾಜು, ಮಲ್ಲೇಶ್, ವೆಂಕಟರಾಮು, ಜಯರಾಂ, ಹೊನ್ನಗಿರಿ, ಗವಿ, ಹೇಮಂತ್ಕುಮಾರ್ ಮತ್ತಿತರರಿದ್ದರು.