ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಅಗತ್ಯತೆ ಇದೆ ಎಂದು ಬಿಜೆಪಿ ಮುಖಂಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್ ಕರೆ ನೀಡಿದರು.
ಹೊಸ ವರ್ಷದ ಅಂಗವಾಗಿ ಮಂಡ್ಯ ನಗರದ ಶ್ರೀರಂಜಿನಿ ಕಲಾ ವೇದಿಕೆ, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್, ಕರ್ನಾಟಕ ರಕ್ಷಣಾ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ , ಹೀರೋ ಎಲೆಕ್ಟ್ರಿಕ್ ಮೋಟಾರ್ಸ್ ಮಂಡ್ಯ ಇವರ ಆಶ್ರಯದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನ ಬದುಕಿನಲ್ಲಿ ಅದಮ್ಯ ಉತ್ಸಾಹವನ್ನು ತುಂಬಿ, ಅವನನ್ನು ಚೇತನ ಶೀಲನನ್ನಾಗಿಸುತ್ತದೆ. ಈ ನಿಟ್ಟಿನಲ್ಲಿ ಸಂಘ, ಸಂಘಟನೆಗಳು ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ, ಸಹಕಾರ ಅಗತ್ಯ. ಕಳೆದ 35 ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ರಂಜಿನಿ ಕಲಾ ವೇದಿಕೆ ಕಾರ್ಯ ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ತಗ್ಗಹಳ್ಳಿ ವೆಂಕಟೇಶ್ ಮಾತನಾಡಿ, ಮಂಡ್ಯ ಜಿಲ್ಲೆ ಸಾಂಸ್ಕೃತಿಕ ಪ್ರಕಾರಗಳ ಆಗರವಾಗಿದ್ದು ಜಾತ್ಯಾತೀತವಾಗಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜಕೀಯ ಮುಖಂಡರು ಕಲಾಪೋಷಕರು ಭಾಗವಹಿಸುತ್ತಿ ರುವುದು ಅತ್ಯಂತ ಮೆಚ್ಚುಗೆಯ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಸಿ.ಕೆ. ನರಸಿಂಹ ಸ್ವಾಮಿ ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ, ಮಂಜುನಾಥ ಶಾಸ್ತ್ರಿ, ಕೆ.ಪಿ.ಅರುಣ ಕುಮಾರಿ, ತಗ್ಗಳ್ಳಿ ವೆಂಕಟೇಶ್ ಹಾಗೂ ರಂಗಭೂಮಿ ಕ್ಷೇತ್ರದ ಸಾಧಕ ಎನ್.ತಮ್ಮಣ್ಣ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಟಿ . ಶಂಕರೇಗೌಡ,ಕಸಾಪ ಕೋಶಾಧ್ಯಕ್ಷ ಅಪ್ಪಾಜಪ್ಪ, ವಕೀಲ ಪಿ.ಎಂ.ಸೋಮಶೇಖರ್, ನಗರ ಕ.ಸಾ.ಪ.ಅಧ್ಯಕ್ಷೆ ಸುಜಾತಾ ಕೃಷ್ಣ, ಮನ್ ಮುಲ್ ಮಾಜಿ ನಿರ್ದೇಶಕಿ ನೀನಾ ಪಟೇಲ್, ಹೀರೋ ಎಲೆಕ್ಟ್ರಿಕ್ ಮೋಟಾರ್ಸ್ ನ ಮಾಲೀಕ ಎಂ.ವಿನಯ್ ಕುಮಾರ್, ರಂಜಿನಿ ಕಲಾ ವೇದಿಕೆಯ ಸಿ.ಪಿ.ವಿದ್ಯಾಶಂಕರ್ ಭಾಗವಹಿಸಿದ್ದರು.