ಓದುವ ವಾತಾವರಣವನ್ನು ವಿದ್ಯಾರ್ಥಿಗಳಿಗೆ ನಿರ್ಮಾಣ ಮಾಡುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯವಾಗಬೇಕು. ಆಗ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಹೇಳಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಮಂಡ್ಯನಗರದ ಪತ್ರಕರ್ತರ ಆವರಣದಲ್ಲಿ ನಡೆದ ಸಾವಿತ್ರಿಬಾಯಿ ಬಾಯಿ ಫುಲೆ ಜನ್ಮದಿನಾಚರಣೆ ಹಾಗೂ ಐದನೇ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದರು.
ಜಿಲ್ಲೆಯು ಎಸ್ಸೆಸ್ಸೆಲ್ಸಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು, ಇದನ್ನು ಆರನೇ ಸ್ಥಾನಕ್ಕೆ ತರುವಲ್ಲಿ ಕೃಷಿ ಕೂಲಿಕಾರರ ಮಕ್ಕಳ ಶ್ರಮ ಅಪಾರವಾಗಿದೆ, ಇದೇ ರೀತಿ ವಿದ್ಯಾರ್ಥಿಗಳು ಶ್ರಮಪಟ್ಟರೆ ಮೊದಲನೇ ಸ್ಥಾನಕ್ಕೆ ಹೋಗಲು ಸಹಕಾರಿ ಆಗುತ್ತದೆ ಎಂದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಸಾವಿತ್ರಿ ಬಾಯಿಪುಲೆ ಅವರು ಸಣ್ಣ ವಯಸ್ಸಿನಲ್ಲಿಯೇ ಮದುವೆ ಆದರು. ನಂತರ ಅವರು 15ನೇ ವಯಸ್ಸಿನಲ್ಲಿಯೇ ವಿದ್ಯೆ ಕಲಿತು ಭಾರತದ ಮೊದಲನೇ ಶಿಕ್ಷಕಿಯಾಗಿ ಹಾಗೂ ಭಾರತದ ಮೊದಲ ಹೆಣ್ಣು ಮಕ್ಕಳ ಶಾಲೆ ತೆರೆದು ಶಿಕ್ಷಣ ನೀಡಿ ಮಾದರಿಯಾಗಿದ್ದಾರೆ. ಅವರ ಆದರ್ಶ ಎಲ್ಲರಿಗೂ ದಾರಿದೀಪವಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಿ.ಎಂ.ಮಲ್ಲಯ್ಯ, ಕಪನಿಗೌಡ, ಸರೋಜಮ್ಮ, ಸಂತೋಷ್, ಸುಭಾವತಿ, ಅರುಣ್ಕುಮಾರ್, ಅಮಾಸಯ್ಯ, ಅಬ್ದುಲ್, ವಸಂತ, ರಾಮಣ್ಣ, ಆನಂದ್, ಮಲ್ಲೇಶ್ ಭಾಗವಹಿಸಿದ್ದರು.