ಮಂಡ್ಯ ತಾಲೂಕಿನ ಗೋಪಾಲಪುರದಲ್ಲಿರುವ ಮೀನುಮರಿ ಉತ್ಪಾದನಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್ ರಾಯಪುರ ಹೇಳಿದರು.
ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿರುವ ಮೀನು ಮರಿ ಉತ್ಪಾದನಾ ಕೇಂದ್ರಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, 15 ಎಕರೆಯಲ್ಲಿರುವ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಎರಡು ತೊಂದರೆಗಳಿಂದ ಮೀನು ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಈ ನಿಟ್ಟಿನಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಮೂಲಕ ಸುತ್ತಮುತ್ತಲ ಚಿತ್ರಣ ಬದಲಾಯಿಸಿ, ಸಾಲ್ವನಿ ಎಲೆಗಳಿಂದ ಮೀನು ಮರಿ ಬೆಳವಣಿಗೆ ಆಗದೆ ಸಾವನ್ನಪ್ಪುತ್ತಿವೆ. ಅದಕ್ಕಾಗಿ ಅರಣ್ಯ ಇಲಾಖೆಯಿಂದ ಮರಗಳನ್ನೇ ಕಡಿಸಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಬೇರೆ ಜಿಲ್ಲೆಗೆ ಹೋಗಿ ಮೀನು ಉತ್ಪಾದನೆ ಮಾಡುವ ಬದಲು ಗೋಪಾಲಪುರದ ಮೀನು ಉತ್ಪಾದನಾ ಕೇಂದ್ರವನ್ನು ಅಭಿವೃದ್ಧಿಪಡಿಸಿದರೆ ಮಂಡ್ಯ ಜಿಲ್ಲೆಯ ಎಲ್ಲಾ ಕಡೆ ಮೀನು ಉತ್ಪಾದನೆಗೆ ಬೇಡಿಕೆ ಬರುತ್ತದೆ. ಆ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯ ಕೆರೆಗಳಲ್ಲಿ ಮೀನು ಮರಿ ಉತ್ಪಾದನೆಯನ್ನು ರೈತರು ಮಾಡಬಹುದು ಎಂದರು.
ಮತ್ಸೋದ್ಯಮದಿಂದ ಮಂಡ್ಯ ಜಿಲ್ಲೆಯ ಆರ್ಥಿಕತೆಯ ಚಿತ್ರಣ ಬದಲಾಯಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮುಂದಿನ ಎರಡು ವಾರಗಳಲ್ಲಿ ಸಭೆಗಳನ್ನು ಕರೆದು ಚರ್ಚೆ ಮಾಡಿ ಗೋಪಾಲಪುರ ಮೀನು ಮರಿ ಉತ್ಪಾದನಾ ಕೇಂದ್ರವನ್ನು ಪುನರ್ ಆರಂಭಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ಶ್ರೀನಿವಾಸ್, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ , ಜಿ.ಪಂ. ಸಿಇಒ ಶಾಂತ ಹುಲ್ಮನಿ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜೇಶ್, ಸಹಾಯಕ ನಿರ್ದೇಶಕ ಮಹದೇವಸ್ವಾಮಿ, ಮಂಡ್ಯ ತಾಲೂಕು ಸಹಾಯಕ ನಿರ್ದೇಶಕ ಕೆ.ಎಂ.ಲೋಕೇಶ್, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ, ಗೋಪಾಲ ಪುರ ಗ್ರಾಮದ ಮುಖಂಡ ಭಾನುಪ್ರಕಾಶ್ ಹಾಜರಿದ್ದರು.