ಎನ್.ಡಿ.ಆರ್.ಎಫ್ ತಂಡವು ಜಿಲ್ಲೆಯಲ್ಲಿ ಜನವರಿ 10 ರಿಂದ 21 ರವರೆಗೆ ವಿವಿಧ ಸ್ಥಳಗಳಲ್ಲಿ ವಿಪತ್ತು ನಿರ್ವಹಣೆ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ ಹೆಚ್ ಎನ್ ಗೋಪಾಲಕೃಷ್ಣ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಫೇಮಕ್ಸ್ ವಿಪತ್ತು ನಿರ್ವಹಣೆ ಜಾಗೃತಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಡ್ಯ ಜಿಲ್ಲೆಯಲ್ಲಿ ನಾಲೆಗಳು ಹೆಚ್ಚಿದ್ದು, ಇತ್ತೀಚಿನ ದಿನಗಳಲ್ಲಿ ನೆರೆ ಪರಿಸ್ಥಿತಿ ಹೆಚ್ಚಿದೆ. ನೆರೆ, ಬೆಂಕಿ ಅನಾಹುತಗಳು, ಅಪಘಾತದಲ್ಲಿ ರಕ್ತಶ್ರಾವ ಪರಿಸ್ಥಿತಿ, ನೀರಿನಲ್ಲಿ ಮುಳುಗಡೆಯಾದ ವ್ಯಕ್ತಿ ರಕ್ಷಿಸುವ ಸಂದರ್ಭ, ಸ್ವಯಂ ರಕ್ಷಣೆ ಕಲೆಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ ಎಂದರು.
ವಿದ್ಯಾರ್ಥಿಗಳಿಗೆ ಜನವರಿ 10 ರಂದು ಮಂಡ್ಯ ನಗರದ ಕಲ್ಲು ಕಟ್ಟಡ ಸರ್ಕಾರಿ ಬಾಲಕಿಯರ ಕಾಲೇಜು, ಹಿರಿಯ ನಾಗರೀಕರು ಹಾಗೂ ವಿಕಲಚೇತನರಿಗೆ ಜ.16ರಂದು ಹರ್ಡಿಕರ್ ಭವನದಲ್ಲಿ, ಯುವ ಜನರಿಗೆ ಜ.20 ರಂದು ನೆಹರು ಯುವ ಕೇಂದ್ರದಲ್ಲಿ ಆಯೋಜಿಸಲಾಗುವುದು. ಸಮುದಾಯ ಹಾಗೂ ಸಾರ್ವಜನಿಕರಿಗೆ ಜನವರಿ 12 ರಂದು ಪಾಂಡವಪುರ ಸುಂಕತೊಣ್ಣೂರು ಗ್ರಾಮ ಪಂಚಾಯತಿ, ಜನವರಿ 13 ರಂದು ಶ್ರೀರಂಗಪಟ್ಟಣ ಅರಕೆರೆ ಗ್ರಾಮ ಪಂಚಾಯತಿ, ಜನವರಿ 18 ರಂದು ಮಳವಳ್ಳಿಯ ಹಲಗೂರು ಗ್ರಾಮ ಪಂಚಾಯತಿಯಲ್ಲಿ ನಡೆಯಲಿದೆ.
ಜನವರಿ 11 ರಂದು ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿ, ಜ.17 ರಂದು ಕೆ.ಆರ್.ಪೇಟೆಯ ಐ.ಸಿ.ಎಲ್ ಕಾರ್ಖಾನೆಯಲ್ಲಿ, ಜ.19 ರಂದು ಕೆ.ಆರ್.ಎಸ್ ನಲ್ಲಿ ನಡೆಯಲಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿಸುವಂತೆ ಅಧಿಕಾರಿಗಳು ತಿಳಿಸಿದರು.
ಎನ್.ಡಿ.ಆರ್.ಎಫ್ ಅಧಿಕಾರಿಗಳೊಂದಿಗೆ ಕಂದಾಯ, ಅಗ್ನಿಶಾಮಕ ದಳ, ಆರೋಗ್ಯ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಸಿಇಓ ಶಾಂತ ಎಲ್ ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಎನ್.ಡಿ.ಆರ್.ಎಫ್ ಅಧಿಕಾರಿ ದೇವರಾಜ್, ಜಿ.ಎಲ್.ಅಕಾಶ್, ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧನಂಜಯ್, ಅಗ್ನಿಶಾಮಕ ಅಧಿಕಾರಿ ಗುರುರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.